ADVERTISEMENT

ಮಾಗಡಿ: ಜೇನು ಕೃಷಿ ಕೌಶಲಾಭಿವೃದ್ಧಿ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:07 IST
Last Updated 4 ಫೆಬ್ರುವರಿ 2020, 13:07 IST
ಮಾಗಡಿ ಕೆವಿಕೆಯಲ್ಲಿ ನಡೆದ ಜೇನುಕೃಷಿ ಕೌಶಾಲ್ಯಾಭಿವೃದ್ಧಿ ತರಬೇತಿಯಲ್ಲಿ ವಿಜ್ಞಾನಿ ಡಾ.ರಾಜೇಂದ್ರ ಪ್ರಸಾದ್‌ ಪ್ರಾತ್ಯಕ್ಷಿಕೆ ನಡೆಸಿದರು.
ಮಾಗಡಿ ಕೆವಿಕೆಯಲ್ಲಿ ನಡೆದ ಜೇನುಕೃಷಿ ಕೌಶಾಲ್ಯಾಭಿವೃದ್ಧಿ ತರಬೇತಿಯಲ್ಲಿ ವಿಜ್ಞಾನಿ ಡಾ.ರಾಜೇಂದ್ರ ಪ್ರಸಾದ್‌ ಪ್ರಾತ್ಯಕ್ಷಿಕೆ ನಡೆಸಿದರು.   

ಮಾಗಡಿ: ತರಬೇತಿಯಲ್ಲಿ ಪಡೆದ ಕೌಶಲವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇತರರ ಮೇಲೆ ಅವಲಂಬಿತರಾಗದೆ ಆದಾಯವನ್ನು ಗಳಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಮುಖ್ಯಸ್ಥೆ ಡಾ.ಸವಿತಾ.ಎಸ್‌.ಮಂಗಾನವರ ತಿಳಿಸಿದರು.

ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲು ಕೆವಿಕೆಯಲ್ಲಿ ನಡೆದ ಜೇನು ಕೃಷಿ ಕೌಶಲಾಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜೇನು ಸಾಕಾಣಿಕೆ ಮತ್ತು ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಅವುಗಳನ್ನು ಸಮರ್ಪಕವಾಗಿ ಉತ್ಪಾದಿಸಿ ಮಾರುಕಟ್ಟೆ ಮಾಡಿ ಅಧಿಕ ಲಾಭ ಗಳಿಸಲು ತರಬೇತಿಯಲ್ಲಿ ಪಡೆದ ಅಂಶಗಳನ್ನು ಉಪಯೋಗಿಸಿಕೊಳ್ಳಲು ಮುಂದಾಗಬೇಕು ಎಂದರು.

ADVERTISEMENT

ಜಿಲ್ಲೆಯ 15 ಯುವ ರೈತರು ಮತ್ತು ರೈತ ಮಹಿಳೆಯರಿಗೆ 6 ದಿನಗಳ ಕೌಶಲಾಭಿವೃದ್ಧಿ ತರಬೇತಿಯ ಮಹತ್ವವನ್ನು ಕೇಂದ್ರದ ವಿಜ್ಞಾನಿ ಡಾ. ರಾಜೇಂದ್ರ ಪ್ರಸಾದ್‌ ತಿಳಿಸಿದರು. ಜೇನು ಸಾಕಾಣಿಕೆ ಪ್ರಾಮುಖ್ಯತೆ, ಪ್ರಭೇದಗಳು ಮತ್ತು ಅವುಗಳ ಮಹತ್ವ, ವಿವಿಧ ಋತುಮಾನಗಳಲ್ಲಿ ಜೇನು ಕುಟುಂಬಗಳ ನಿರ್ವಹಣೆ ಹಾಗೂ ಜೇನು ನೊಣಗಳಿಂದ ತಯಾರಿಸಬಹುದಾದ ವಿವಿದ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಜೇನು ನೊಣಗಳ ಪರಾಗ ಸ್ಪರ್ಶ ಅವಧಿ ಹಾಗೂ ಬೆಳೆ ಇಳುವರಿಯಲ್ಲಿ ಜೇನುನೊಣಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

6 ದಿನಗಳ ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಹಾಗೂ ಇನ್ನಿತರ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಮಾಹಿತಿ ಕೊಡಲಾಯಿತು. ರೈತರಿಗೆ ಜೇನ್ನೊಣ ಗೂಡಿನ ಒಳರಚನೆ, ಜೇನು ಕುಟುಂಬಗಳ ನಿರ್ವಹಣೆ, ಜೇನು ಕುಟುಂಬ ವಿಭಜನೆ ಮತ್ತು ಒಂದುಗೂಡುವಿಕೆ, ಜೇನು ತುಪ್ಪದ ಕೊಯ್ಲು ಮತ್ತು ಪರೀಕ್ಷೆ, ಜೇನು ಸಂಸ್ಕರಣೆ ಮತ್ತು ಜೇನು ಮೇಣ ಸಂಸ್ಕರಣೆ ಹಾಗೂ ಸಕರ್ಾರದಿಂದ ಜೇನು ಸಾಕಾಣಿಕೆಗೆ ನೀಡುವ ಯೋಜನೆಗಳು ಮತ್ತು ಎಫ್.ಎಸ್.ಎಸ್.ಎ.ಐ. ಲೈಸೆನ್ಸ್ ಪಡೆಯುವ ವಿಧಾನ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.