ರಾಮನಗರ: ರಾಜ್ಯ ಸರ್ಕಾರ ಇಂದೇ ಡಿ.ಕೆ. ಸಹೋದರರನ್ನು ಬಂಧಿಸಿ ಮೇಕೆದಾಟು ಪಾದಯಾತ್ರೆಗೆ ತಡೆ ಒಡ್ಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ' ಸದ್ಯ ನಡೆದಿರುವ ಪಾದಯಾತ್ರೆಯು ಡಿಕೆಶಿ ಡ್ರಾಮಾ ಡ್ಯಾನ್ಸ್. ಇದಕ್ಕೆ ಗಂಭೀರತೆ ಎನ್ನುವುದೇ ಇಲ್ಲ. ಸರ್ಕಾರ ಇಂದೇ ಇದಕ್ಕೆ ತಡೆ ಒಡ್ಡದೇ ಹೋದರೆ ನಮ್ಮದು ದುರ್ಬಲ ಸರ್ಕಾರ ಎಂಬ ಅಭಿಪ್ರಾಯ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ಪಾದಯಾತ್ರೆ ತಡೆಯಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರೇ ರಸ್ತೆಗೆ ಇಳಿದು ಪಾದಯಾತ್ರೆ ತಡೆಯುತ್ತೇವೆ ಎಂದರು.
ಡಿ.ಕೆ. ಶಿವಕುಮಾರ್ ಗೆ ಕಾನೂನು ಬಗ್ಗೆ ಗೌರವ ಇಲ್ಲ. ಎಫ್ ಐಆರ್ ದಾಖಲಿಸಿದ ಮೇಲೂ ಹೊರ ಜಿಲ್ಲೆಗಳಿಂದ ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಕೊರೊನಾ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಪಾದಯಾತ್ರೆಯಲ್ಲಿ ಭಾಗಿ ಆಗುವ ಮುನ್ನ ಅವರಾದರೂ ಯೋಚನೆ ಮಾಡಬೇಕಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಇದೇ ಶಿವಕುಮಾರ್ ರನ್ನು ಒಂದು ವರ್ಷ ತನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಇಂತಹ ಕ್ರಿಮಿನಲ್ ಗಳ ಜೊತೆ ಸೇರಿ ಸರ್ಕಾರ ನಡೆಸಲಾರೆ ಎಂದಿದ್ದರು ಎಂದು ಸ್ಮರಿಸಿದರು.
ನಮ್ಮ ಸರ್ಕಾರ ಕಳೆದ ನಾಲ್ಕು ದಿನದಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ನ್ಯಾಯಾಲಯ ಮಧ್ಯ ಪ್ರವೇಶಿಸುವ ಮುನ್ನವೇ ಕ್ರಮ ಕೈಗೊಳ್ಳಬಹುದಿತ್ತು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.