ADVERTISEMENT

ಟೊಯೊಟಾ ಕಾರ್ಮಿಕರಿಂದ ‘ಛತ್ರಿ ಚಳವಳಿ‘

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 13:30 IST
Last Updated 11 ಡಿಸೆಂಬರ್ 2020, 13:30 IST
ಟೊಯೊಟಾ ಕಾರ್ಮಿಕರು ಶುಕ್ರವಾರ ಛತ್ರಿ ಚಳವಳಿ ನಡೆಸಿದರು
ಟೊಯೊಟಾ ಕಾರ್ಮಿಕರು ಶುಕ್ರವಾರ ಛತ್ರಿ ಚಳವಳಿ ನಡೆಸಿದರು   

ಬಿಡದಿ: ಕಾರ್ಮಿಕರು ಹಾಕಿದ್ದ ಪೆಂಡಾಲ್‌ ತೆರವುಗೊಳಿಸಿದ್ದನ್ನು ಖಂಡಿಸಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿ ನೌಕರರು ಶುಕ್ರವಾರ ‘ಛತ್ರಿ ಚಳವಳಿ’ ಮೂಲಕ ತಮ್ಮ ಪ್ರತಿಭಟನೆ
ಮುಂದುವರಿಸಿದರು.

ಟೊಯೊಟಾ ಕಂಪನಿಯ ಪ್ರವೇಶ ದ್ವಾರದ ಮುಂಭಾಗ ಬೇರೆ ಕಂಪನಿಯೊಂದಕ್ಕೆ ಸೇರಿದ ಖಾಲಿ ಜಾಗದಲ್ಲಿ ಕಾರ್ಮಿಕರು ಪೆಂಡಾಲ್‌ ಹಾಕಿ ತಿಂಗಳಿನಿಂದ ಪ್ರತಿಭಟನೆ ನಡೆಸಿದ್ದರು. ಕೈಗಾರಿಕೆ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ಕಾರಣ ಕೇಳಿ ಕೆಐಎಡಿಬಿಯು ಸಂಬಂಧಿಸಿದ ಕಂಪನಿ ಮಾಲೀಕರಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಆ ಕಂಪನಿಯ ಮಾಲೀಕರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಗುರುವಾರ ಸಂಜೆ ಪ್ರತಿಭಟನೆ ಸ್ಥಳದಲ್ಲಿ ಇದ್ದ ಪೆಂಡಾಲ್ ಅನ್ನು ತೆರವುಗೊಳಿಸಿದ್ದರು.

ಪ್ರತಿಭಟನೆಯ 33ನೇ ದಿನವಾದ ಶುಕ್ರವಾರ ಪ್ರತಿಭಟನಾಕಾರರು ಅದೇ ಜಾಗದಲ್ಲಿ ಕೈಯಲ್ಲಿ ಛತ್ರಿಗಳನ್ನು ಹಿಡಿದು ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು. ‘ಕಾರ್ಮಿಕರ ಹೋರಾಟವನ್ನು ಹತ್ತಿಕ್ಕಲು ಕಂಪನಿಯ ಆಡಳಿತ ಮಂಡಳಿಯು ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ. ಬೇಕೆಂತಲೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪೆಂಡಾಲ್‌ ತೆರವುಗೊಳಿಸಲಾಗಿದೆ. ಇದ್ಯಾವುದಕ್ಕೂ ಕಾರ್ಮಿಕರು ಬಗ್ಗುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಕಾರ್ಮಿಕ ಸಂಘದ ಮುಖಂಡರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.