
ಚನ್ನಪಟ್ಟಣ: ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದ ಜಮೀನುಗಳಿಗೆ ಶುಕ್ರವಾರ ರಾತ್ರಿ ನುಗ್ಗಿದ ಕಾಡಾನೆ ಹಿಂಡೊಂದು ತೆಂಗು, ರಾಗಿ, ಭತ್ತದ ಬೆಳೆಗಳನ್ನು ಸಂಪೂರ್ಣ ಧ್ವಂಸ ಮಾಡಿವೆ.
ಗ್ರಾಮಕ್ಕೆ ನುಗ್ಗಿದ ಎಂಟು ಕಾಡಾನೆಗಳು 14 ತೆಂಗಿನ ಮರ, ಒಂದು ಎಕೆರೆಯಲ್ಲಿ ಬೆಳೆದಿದ್ದ ರಾಗಿ, ಒಂದು ಎಕರೆ ಭತ್ತದ ಬೆಳೆಯನ್ನು ನಾಶಪಡಿಸಿವೆ.
ತೆಂಗಿನ ಮರಗಳನ್ನು ಉರುಳಿಸಿ ತೆಂಗಿನ ಕಾಯಿಗಳನ್ನು ಕಿತ್ತು ಬಿಸಾಡಿವೆ. ರಾಗಿ ಹಾಗೂ ಭತ್ತದ ಬೆಳೆ ತಿಂದು, ತುಳಿದು ಧ್ವಂಸ ಮಾಡಿವೆ. ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಶಾಶ್ವತವಾಗಿ ಕಾಡಿಗಟ್ಟಬೇಕು. ಬೆಳೆಗಳಿಗೆ ರಕ್ಷಣೆ ನೀಡಬೇಕು.ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಕಾಡಿನಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವತ್ತ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತರಾದ ಬಸವರಾಜು, ಶಿವಲಿಂಗಯ್ಯ, ದೇಸಯ್ಯ ಒತ್ತಾಯಿಸಿದ್ದಾರೆ.