
ಕನಕಪುರ ಬಸವನಹಳ್ಳಿಯಲ್ಲಿ ಕಾಡಾನೆಗಳು ದಾಳಿ ನಡೆಸಿ ತೆಂಗಿನ ಗಿಡಗಳನ್ನು ನಾಶಗೊಳಿಸಿರುವುದು
ಕನಕಪುರ: ಕಾಡಾನೆಗಳ ದಾಳಿಯಿಂದ ಬಸವನಹಳ್ಳಿಯಲ್ಲಿ ತೆಂಗು ಮತ್ತು ಮಾವಿನ ಮರಗಳು ಹಾಳಾಗಿವೆ. ಸೋಮವಾರ ರಾತ್ರಿ ಗ್ರಾಮದ ರೈತ ಗಂಟೆ ಲಿಂಗೇಗೌಡರ 22 ತೆಂಗಿನ ಮರ, ಕಾಳೇಗೌಡರ 7 ತೆಂಗಿನ ಮರ, ವಿಜಯಕುಮಾರ್ ಅವರ 10 ತೆಂಗಿನ ಮರ ಮತ್ತು ಮರಿಗೌಡರ 5 ಮಾವಿನ ಮರಗಳು ಕಾಡಾನೆಗಳ ದಾಳಿಗೆ ನಾಶವಾಗಿವೆ.
ಎರಡು ಕಾಡಾನೆಗಳು ತೋಟಗಳಿಗೆ ನುಗ್ಗಿ, ಫಸಲು ಬಿಡಲು ಪ್ರಾರಂಭಿಸಿದ್ದ ಸುಮಾರು ಏಳು ವರ್ಷದ ತೆಂಗಿನ ಗಿಡಗಳ ಸುಳಿಗಳನ್ನು ಕಿತ್ತು ತಿಂದಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಗೆ ಗುರಿಯಾದ ತೋಟಗಳನ್ನು ಸಂದರ್ಶಿಸಿ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರಿಂದ ವಿವರ ಪಡೆದರು. ಹಾನಿಗೊಳಗಾದ ತೆಂಗು ಮತ್ತು ಮಾವಿನ ಗಿಡಗಳ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ನಾಶವಾದ ತೆಂಗಿನ ಗಿಡಗಳು ಸುಮಾರು ಏಳರಿಂದ ಎಂಟು ವರ್ಷದ ಫಸಲು. ಸರ್ಕಾರ ಪ್ರತಿ ಗಿಡಕ್ಕೆ ನೀಡುವ ₹1 ಸಾವಿರ ಪರಿಹಾರ ಬಹಳ ಕಡಿಮೆ ಎಂದು ಅವರ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯು ನಾಶವಾದ ಪ್ರತಿ ಗಿಡಕ್ಕೂ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕೆಂದು ಯುವ ರೈತ ಕುಮಾರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.