
ರಾಮನಗರ: ಕನಕಪುರ ತಾಲ್ಲೂಕಿನ ಸಾತನೂರು ಅರಣ್ಯ ವಲಯದ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಎರಡು ಕಾಡಾನೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಅರಣ್ಯ ಇಲಾಖೆ ಮೇಲಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬನ್ನೇರುಘಟ್ಟ ಅರಣ್ಯಕ್ಕೆ ಕೂನೂರು ಹಿನ್ನೀರು ಮಾರ್ಗವಾಗಿಯೇ ಆನೆಗಳನ್ನು ಮರಳಿ ಕಾಡಿಗೆ ಓಡಿಸಲಾಗುತ್ತಿತ್ತು. ಅದರಂತೆ ಏಳು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯಲ್ಲಿ ಎರಡು ಆನೆಗಳು ಮಾತ್ರ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಳ್ಳಲು ಕಾರಣವಾದ ಅಂಶಗಳೇನು ಎಂಬುದು ಸೇರಿದಂತೆ ಆನೆ ಕಾರ್ಯಾಚರಣೆ ಬಗ್ಗೆ ಸಮಗ್ರ ವರದಿ ಕೇಳಿದ್ದಾರೆ.
ಕಳೆ ತೆರವಿಗೆ ಪತ್ರ: ಹಿನ್ನೀರಿನಲ್ಲಿ ಬೆಳೆದಿರುವ ಕಳೆ (ಜೊಂಡು) ಕಾಡಾನೆಗಳ ಜೀವಕಕ್ಕೆ ಕಂಟಕವಾಗಿದ್ದು ಕೂಡಲೇ ಅದನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಲು ಜಲ ಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆಯಲು ಅರಣ್ಯ ಇಲಾಖೆ ಮುಂದಾಗಿದೆ.
ಆನೆಗಳು ಸಾಗುವ ಮಾರ್ಗದಲ್ಲಿ ಬೆಳೆದಿರುವ ಕಳೆಗಳನ್ನು ತೆರವುಗೊಳಿಸಿದರೆ ಮತ್ತೆ ಇಂತಹ ಅವಘಡ ಸಂಭವಿಸುವುದಿಲ್ಲ ಎಂಬುದು ಇಲಾಖೆಯ ಚಿಂತನೆಯಾಗಿದೆ. ಕಳೆ ತೆರವು ಕುರಿತು ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗುವುದು’ ಎಂದು ಎಸಿಎಫ್ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.