ADVERTISEMENT

ಹೊತ್ತಿ ಉರಿದ ಆಹಾರ ಪದಾರ್ಥ ಕಾರ್ಖಾನೆ

ಬೆಂಕಿ ಕೆನ್ನಾಲಿಗೆ ಜೊತೆ ಕೆಂಪು ಮೆಣಸಿನ ಘಾಟು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:59 IST
Last Updated 29 ಡಿಸೆಂಬರ್ 2025, 5:59 IST
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದ ವಿನ್ ಸೂಪರ್ ಫುಡ್ ಕಾರ್ಖಾನೆ ಘಟಕ ಹೊತ್ತಿ ಉರಿಯುತ್ತಿರುವುದು
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದ ವಿನ್ ಸೂಪರ್ ಫುಡ್ ಕಾರ್ಖಾನೆ ಘಟಕ ಹೊತ್ತಿ ಉರಿಯುತ್ತಿರುವುದು   

ಹಾರೋಹಳ್ಳಿ: ಇಲ್ಲಿಯ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿರುವ ವಿನ್ ಸೂಪರ್ ಫುಡ್ ಆಹಾರ ಪದಾರ್ಥ ಕಾರ್ಖಾನೆ ಘಟಕಕ್ಕೆ ಭಾನುವಾರ ಬೆಳಗ್ಗೆ 8ಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಭಸ್ಮವಾಗಿವೆ. 

ನೋಡ, ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಯನ್ನು ವ್ಯಾಪಿಸಿತು. ಭಾನುವಾರ ರಜೆಯ ಕಾರಣ ಹೆಚ್ಚಿನ ಸಿಬ್ಬಂದಿ ಮತ್ತು ಕಾರ್ಮಿಕರು ಇರಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಕಾರ್ಯಚರಣೆಗೆ ಇಳಿದರು.

ಮಧ್ಯಾಹ್ನದವರೆಗೂ ಬೆಂಕಿ ನಂದಿಸಲು ಪರದಾಡಬೇಕಾಯಿತು. ಬೆಂಕಿ ತಗುಲಿದ ವಿಷಯ ಗೊತ್ತಾಗುತ್ತಿದ್ದಂತೆಯೇ  ನೂರಾರು ಜನರು  ಕಾರ್ಖಾನೆ ಬಳಿ ನೆರೆದಿದ್ದರು. ಬೆಂಕಿಯ ಕೆನ್ನಾಲಿಗೆ ಜೊತೆ ಕೆಂಪು ಮೆಣಸಿನಕಾಯಿ ಘಾಟು ಹರಡಿದ ಕಾರಣ ಎಲ್ಲರೂ ಕೆಮ್ಮುತ್ತ ಜಾಗ ಖಾಲಿ ಮಾಡಿದರು.

ADVERTISEMENT

ಬೆಂಕಿ ಹೊತ್ತಿಕೊಳ್ಳಲು ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ.ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿ ಕೊಂಡಿರಬಹುದು ಎಂದು  ಪೊಲೀಸರು ಶಂಕಿಸಿದ್ದಾರೆ. ಕಾರ್ಖಾನೆ ಮಾಲೀಕರು ದೂರು ನೀಡದ ಕಾರಣ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಹಾರೋಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿದ ಬೆಂಕಿ ದುರಂತ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ವರ್ಷ ಕನಿಷ್ಠ ಮೂರರಿಂದ ನಾಲ್ಕು ಬೆಂಕಿ ಅನಾಹುತ ಸಂಭವಿಸುತ್ತಿವೆ. ಬೆಂಕಿ ಅನಾಹುತ ತಡೆಯಲು ನಿಯಮ ಮಾರ್ಗಸೂಚಿಗಳನ್ನು ಕಾಲಕಾಲಕ್ಕೆ ಹೊರಡಿಸಲಾಗುತ್ತದೆ. ಇವನ್ನು ಕಾರ್ಖಾನೆಗಳು ಉಲ್ಲಂಘಿಸುವ ಉಪೇಕ್ಷಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಹಾಗಾಗಿ ಬೆಂಕಿ ದುರಂತಗಳು ಮರುಕಳಿಸುತ್ತಿವೆ ಎನ್ನುತ್ತಾರೆ ಅಗ್ನಿಶಾಮಕದಳದ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಕಾರ್ಖಾನೆಗಳಿದ್ದರೂ ಅಗ್ನಿಶಾಮಕ ಠಾಣೆ ಇಲ್ಲ. ಬೆಂಕಿ ಅನಾಹುತ ಸಂಭವಿಸಿದರೆ ಕನಕಪುರ ಅಥವಾ ರಾಮನಗರದಿಂದ ಅಗ್ನಿಶಾಮಕ ವಾಹನಗಳು ಬರಬೇಕು. ಇದಕ್ಕೆ ಸಮಯ ತಗಲುವ ಕಾರಣ ಹೆಚ್ಚಿನ ಅನಾಹುತ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎನ್ನುವುದು ಸಿಬ್ಬಂದಿ ನೀಡುವ ಕಾರಣ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.