ಚನ್ನಪಟ್ಟಣ: ‘ನಮ್ಮ ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಬಲವಂತವಾಗಿ ನಮ್ಮನ್ನು ಒಕ್ಕಲೆಬ್ಬಿಸಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿ ನಗರದ ಮಂಗಳವಾರಪೇಟೆ ರೈತ ಮಹಿಳೆಯರು ಹಾಗೂ ರೈತ ಸಂಘಟನೆ ಸದಸ್ಯರು ತಾಲ್ಲೂಕು ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
‘75 ವರ್ಷಗಳಿಂದ ಈ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ನಮ್ಮನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು’ ಎಂದು ಪ್ರತಿಭಟನನಿರತರು ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
‘24 ಜನರಿಗೆ 75 ವರ್ಷದ ಹಿಂದೆಯೆ 17.24 ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿದೆ. ಅಂದಿನಿಂದ 24 ಜನರು ಭೂಮಿಯ ಅನುಭೋಗದಲ್ಲಿದ್ದಾರೆ. ಆದರೆ ಮಂಗಳವಾರಪೇಟೆಯ ಕೆಲವರು ಏಕಾಏಕಿ ಬಂದು ಈ ಭೂಮಿ ನಮಗೆ ಸೇರಿದ್ದು ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಅದನ್ನು ಕಡೆಗಣಿಸಿ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಕೈವಾಡವೂ ಇದೆ. ತಾಲ್ಲೂಕು ಹಾಗೂ ಜಿಲ್ಲಾಡಳಿತ ನ್ಯಾಯ ಕೊಡಿಸಬೇಕು ಎಂದು ರೈತ ಸಂಘದ ಮುಖಂಡೆ ಅನಸೂಯಮ್ಮ ಒತ್ತಾಯಿಸಿದರು.
ರೈತ ಮಹಿಳೆ ಮಂಗಳವಾರಪೇಟೆ ರತ್ನಮ್ಮ, ರೈತಸಂಘದ ಮುಖಂಡರಾದ ಅಮ್ಮಳ್ಳಿದೊಡ್ಡಿ ರಾಮೇಗೌಡ, ಸಿಂಗರಾಜಿಪುರ ದೇವರಾಜು, ಮಂಗಳವಾರಪೇಟೆ ವಿಶ್ವ, ಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.