ರಾಮನಗರ: ವಿಘ್ನ ವಿನಾಶಕ ವಿನಾಯಕನ ಉತ್ಸವವು ಜಿಲ್ಲೆಯಾದ್ಯಂತ ಸರಳ ಹಾಗೂ ಸಂಭ್ರಮದಿಂದ ನೆರವೇರಿತು.
ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕವಾಗಿ ಅದ್ದೂರಿ ಆಚರಣೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ನಿರ್ಬಂಧ ಹೇರಿದೆ. ಆದಾಗ್ಯೂ ಮನೆ ಮನೆಗಳಲ್ಲಿ ಹಬ್ಬ ಆಚರಣೆಗೆ ಯಾವುದೇ ವಿಘ್ನ ಇರಲಿಲ್ಲ. ಜೊತೆಗೆ ಸಾರ್ವಜನಿಕವಾಗಿಯೂ ಅಲ್ಲಲ್ಲಿ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿತ್ತು.
ದೊಡ್ಡ ಗಾತ್ರದ ಗಜಾನನ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತವು ತಡೆ ಒಡ್ಡಿದೆ. ಹೀಗಾಗಿ ದೊಡ್ಡ ಮೂರ್ತಿಗಳು ಈ ಬಾರಿ ಎಲ್ಲೂ ಕಾಣಲಿಲ್ಲ. ನಾಲ್ಕೈದು ಅಡಿಯ ಮೂರ್ತಿಗಳಷ್ಟೇ ಕಂಡವು. ಸರಳ ಹಾಗೂ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ ಈ ಬಾರಿ ಹೆಚ್ಚು ಒತ್ತು ನೀಡಲಾಗಿತ್ತು. ಎಲ್ಲಿಯೂ ಅದ್ದೂರಿತನ ಇರಲಿಲ್ಲ. ಶನಿವಾರವೂ ನಗರದ ಮಾರುಕಟ್ಟೆಗಳಲ್ಲಿ ಮೂರ್ತಿಗಳ ಖರೀದಿ ನಡೆದಿತ್ತು. ಜನರು ಚೌತಿ ಮೂರ್ತಿ ಪ್ರತಿಷ್ಠಾಪನೆಗಾಗಿ ಕುಟುಂಬಸ್ಥರು ಮಾರುಕಟ್ಟೆಗೆ ಧಾವಿಸಿದ್ದರು. ನಂತರದಲ್ಲಿ ಚಿಕ್ಕ, ಪರಿಸರ ಸ್ನೇಹಿ ಮೂರ್ತಿಗಳನ್ನು ಮನೆಗಳ ಒಳ ಹಾಗೂ ಹೊರಗಿನ ಅಂಗಳದಲ್ಲಿ ಪ್ರತಿಷ್ಟಾಪಿಸಿದರು. ಕೆಲವರು ಶನಿವಾರವೇ ಅವುಗಳನ್ನು ವಿಸರ್ಜನೆ ಮಾಡಿದರೆ, ಇನ್ನೂ ಕೆಲವರು ಮೂರು ದಿನಗಳವರೆಗೂ ಹಬ್ಬ ಆಚರಣೆಗೆ ಮುಂದಾಗಿದ್ದರು.
ಜಿಲ್ಲಾಡಳಿತವು ಈ ವರ್ಷ ಗ್ರಾಮಕ್ಕೆ ಒಂದು ಅಥವಾ ನಗರ ಪ್ರದೇಶದಲ್ಲಿ ವಾರ್ಡ್ ಗೆ ಒಂದರಂತೆ ಸಾರ್ವಜನಿಕ ಮೂರ್ತಿಗಳನ್ನು ಕೂರಿಸಲು ಅವಕಾಶ ನೀಡಿದೆ. ಅದಕ್ಕೂ ಮುನ್ನ ಪೊಲೀಸ್, ಸ್ಥಳೀಯ ಆಡಳಿತದ ಅನುಮತಿ ಪಡೆಯುವುದನ್ನು ಕಡ್ಡಾಯವಾಗಿಸಿದೆ. ಹೀಗಾಗಿ ಈ ಬಾರಿ ಹಿಂದೆಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಮೂರ್ತಿ ಪ್ರತಿಷ್ಟಾಪನೆ ಆಗಿವೆ. ಸಾರ್ವಜನಿಕರ ಭೇಟಿಯೂ ಕಡಿಮೆ ಇದೆ. ಬಹುತೇಕ ಕಡೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಡಿವಾಣ ಬಿದ್ದಿದೆ.
ದೇವಾಲಯಗಳಲ್ಲಿ ವಿಶೇಷ ಪೂಜೆ
ಗಣೇಶ ಚತುದರ್ಶಿ ಪ್ರಯುಕ್ತ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಶನಿವಾರ ಮುಂಜಾನೆಯಿಂದಲೇ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ಹುತ್ತಗಳಿಗೆ ತನಿ ಏರದ ದೃಶ್ಯವೂ ಕಂಡು ಬಂಡಿತು. ಅಲ್ಲಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗವೂ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.