
ಚನ್ನಪಟ್ಟಣ: ‘ಸರ್ವಧರ್ಮ ಸಮನ್ವಯತೆಯನ್ನು ಜಗತ್ತಿಗೆ ಸಾರಿದ ಮಹಾನ್ ಕವಿ ಕುವೆಂಪು ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕನ್ನಡ ಅಧ್ಯಾಪಕ ಯೋಗೇಶ್ ಚಕ್ಕೆರೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಚಕ್ಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತಿಯಲ್ಲಿ ಮಾತನಾಡಿದರು.
ಕುವೆಂಪು ಅವರು ಕನ್ನಡ ಸಾಹಿತ್ಯದ ಮೇಲ್ಪಂಕ್ತಿಯ ಕವಿ. ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ವಿಚಾರಪ್ರೇರಕ ಕೃತಿಗಳನ್ನು ಓದಿ, ಅರ್ಥೈಸಿಕೊಂಡು ಅದರಲ್ಲಿನ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಕುವೆಂಪು ಯುವಜನರಿಗೆ ಎಂದೆಂದಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿ ನಿಲ್ಲುತ್ತಾರೆ ಎಂದರು.
ಶಿಕ್ಷಕ ಮಧುಸೂದನ್ ಮಾತನಾಡಿ, ಕುವೆಂಪು ತಮ್ಮ ಕೃತಿಗಳಲ್ಲಿ ಬರೆದಿದ್ದನ್ನು ಜೀವನದಲ್ಲಿ ಪಾಲಿಸಿದರು. ಪ್ರಾಮಾಣಿಕತೆ ಮತ್ತು ಸರಳತೆ ರೂಢಿಸಿಕೊಂಡ ಅವರು ಎಲ್ಲರಲ್ಲೂ ಪ್ರೀತಿ ಮತ್ತು ಕರುಣೆ ಬಯಸಿದರು. ಮನುಷ್ಯತ್ವದಲ್ಲಿ ನಂಬಿಕೆ ಹೊಂದಿದ್ದ ಅವರು ವಿಶ್ವಮಾನವನಾಗಿ ರೂಪುಗೊಳ್ಳಲು ಪ್ರೇರೇಪಿಸಿದರು. ಸೌಹಾರ್ದ, ಭಾತೃತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಕುವೆಂಪು ಅವರ ವೈಚಾರಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳು ಕುವೆಂಪು ಗೀತೆಗಳನ್ನು ಹಾಡಿದರು. ಶಿಕ್ಷಕರಾದ ಬಿ.ಕೆ.ಲತಾ, ವಿಶ್ವನಾಥ ಸಿಂಗ್, ಪುಟ್ಟಮ್ಮ, ವಸಂತರಾಜ್, ಪ್ರಥಮದರ್ಜೆ ಸಹಾಯಕ ಶಶಿಕುಮಾರ್, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.