ಚನ್ನಪಟ್ಟಣ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಫುಟ್ಬಾಲ್ ಆಟವಾಡುವಾಗ ದಿಢೀರ್ ಭೂಕುಸಿತ ಉಂಟಾಗಿ ಸುಮಾರು 6 ಅಡಿಗಳಷ್ಟು ಆಳದ ಹೊಂಡವೊಂದು ಸೃಷ್ಠಿಯಾಗಿ ಆಟಗಾರನೊಬ್ಬ ಹೊಂಡಕ್ಕೆ ಬಿದ್ದ ಘಟನೆ ಶನಿವಾರ ನಡೆದಿದೆ.
ಕಾಲೇಜಿನ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಪಟುಗಳು, ಸಾರ್ವಜನಿಕರು, ಕ್ರೀಡಾಭಿಮಾನಿಗಳು ಕ್ರೀಡೆಗಾಗಿ ಬಳಸಲು ಹಾಗೂ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಂತದ ಕ್ರೀಡೆಗಳನ್ನು ನಡೆಸಲು ನಗರದಲ್ಲಿ ಇರುವ ಏಕೈಕ ಕ್ರೀಡಾಂಗಣ ಇದಾಗಿದ್ದು, ಇಲ್ಲಿ ಏಕಾಏಕಿ ಭೂಕುಸಿತ ಉಂಟಾಗಿರುವುದು ಆತಂಕ ಸೃಷ್ಠಿಸಿದೆ.
ಕಾಲೇಜು ಆವರಣದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕ್ರಮ, ತಾಲ್ಲೂಕು ಆಡಳಿತದ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುವ ಕಾರಣ ವೇದಿಕೆ ಸಿದ್ಧಗೊಳಿಸಲು ಭೂಮಿಯನ್ನು ಸಡಿಲ ಮಾಡಿದ್ದೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದು ತಹಶೀಲ್ದಾರ್ ನರಸಿಂಹಮೂರ್ತಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಜಾಗದಲ್ಲಿ ಕಾಲೇಜು ಪ್ರಾರಂಭಕ್ಕೂ ಮೊದಲು ಹೊಲಗದ್ದೆಗಳು ಇದ್ದ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ತುಂಬಿಸಲು ಕುಣಿಗಳನ್ನು (ಭೂಮಿಯಲ್ಲಿ ಧಾನ್ಯಸಂಗ್ರಹಿಸಲು ಮಾಡುತ್ತಿದ್ದ ಕುಣಿ) ತೆಗೆದಿರಬಹುದು. ಅದು ಈಗ ಭೂಮಿಕುಸಿತವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಗೆ ವಿಷಯ ತಿಳಿಸಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.