ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ ಏಳನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾಮೂಹಿಕ ಯೋಗಾಸನ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದ್ದು, ಮನೆಗಳಲ್ಲೇ ಜನರು ಯೋಗ, ಧ್ಯಾನ ಹಾಗೂ ಪ್ರಾಣಯಾಮ ಮಾಡಿದರು.
ಜಿಲ್ಲಾ ಮಟ್ಟದಲ್ಲಿ ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಬೆಳಿಗ್ಗೆ 6.30ಕ್ಕೆ ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಜೂಮ್ ಆ್ಯಪ್ ಮೂಲಕ ಉದ್ಘಾಟಿಸಿದರು. ತಾವೂ ಯೋಗಾಭ್ಯಾಸ ನಡೆಸಿ ಎಲ್ಲರನ್ನೂ ಪ್ರೇರೇಪಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ‘ಯೋಗವನ್ನು ಎಲ್ಲರೂ ಅಭ್ಯಾಸ ಮಾಡಿಕೊಂಡು ತಮ್ಮ ಆರೋಗ್ಯವನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಬಹುದು. ಯೋಗವು ಈ ದಿನಕ್ಕಷ್ಟೇ ಸೀಮಿತವಾಗದೆ ಪ್ರತಿನಿತ್ಯದ ರೂಢಿಯಾಗಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಬಿ.ಎಸ್. ರಾಜಲಕ್ಷ್ಮಿ ಪ್ರಾಸ್ತಾವಿಕ ಮಾತನಾಡಿ, ಯೋಗವು ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯಿಂದ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿ ಬಂದಿದೆ. ಮಹರ್ಷಿಗಳು ತಮ್ಮ ದಿವ್ಯ ಜ್ಞಾನದೃಷ್ಟಿಯಿಂದ ಇದರ ಮಹತ್ವ ತಿಳಿದು ಪ್ರತಿನಿತ್ಯ ಅಭ್ಯಾಸಿಸುತ್ತ ಆರೋಗ್ಯವಂತರಾಗಿದ್ದರು. ಯೋಗವು ಮಾನಸಿಕ ಹಾಗೂ ಶಾರೀರಿಕ ದೃಢತೆ ತರುತ್ತದೆ. ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮವನ್ನು ಸೇರಿಸಿ ಸಮಸ್ಥಿತಿಯಲ್ಲಿರಿಸುವುದೇ ಯೋಗದ ವೈಶಿಷ್ಟ್ಯ ಎಂದು ತಿಳಿಸಿದರು.
ಭಾರತದ ಕೊಡುಗೆಯಾಗಿ ವಿಶ್ವವಿಡೀ ಯೋಗ ದಿನ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇದೀಗ ವಿವಿಧ ರಾಷ್ಟ್ರಗಳು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿವೆ ಎಂದರು.
ಬೆಳಿಗ್ಗೆ 6.30ಕ್ಕೆ ಮಾಲತಿ ಸುರೇಶ್ ಪ್ರಾರ್ಥನೆ ಮಾಡಿದರು. 7 ಗಂಟೆಗೆ ಯೋಗಾಭ್ಯಾಸ ಪ್ರಾರಂಭವಾಯಿತು. ರಾಧಿಕಾ ರವಿಕುಮಾರ್ ಅವರು ಯೋಗಾಸನ ಮಾಡಿಸಿದರು. 7.30ಕ್ಕೆ ಪ್ರಾಣಾಯಾಮ, 7.45ಕ್ಕೆ ಧ್ಯಾನ ನಡೆಯಿತು. 93 ಕುಟುಂಬ ಹಾಗೂ ಸಂಸ್ಥೆಗಳ ಮೂಲಕ 345 ಜನ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.