ಮಾಗಡಿ (ರಾಮನಗರ): ಪಟ್ಟಣದ ಹೃದಯಭಾಗದಲ್ಲಿರುವ ಐತಿಹಾಸಿಕ ಮಾಗಡಿ ಕೋಟೆಗೆ ಅಭಿವೃದ್ಧಿಯ ಸ್ಪರ್ಶ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಗತಕಾಲದ ಚರಿತ್ರೆಯ ಕುರುಹಾಗಿ ಕಣ್ಣೆದುರಿಗಿರುವ ಕೋಟೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಗುರುವಾರ ನಡೆಯಲಿರುವ ಸಚಿವ ಸಂಪುಟದ ಸಭೆಯು ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
ಕೋಟೆ ಅಭಿವೃದ್ಧಿ ವಿಷಯವು ಮಾತಿನಲ್ಲಿ ಮುನ್ನೆಲೆಗೆ ಬರುತ್ತದೆಯಾದರೂ, ಇದುವರೆಗೆ ಕೃತಿಗಿಳಿದಿಲ್ಲ. ಪಟ್ಟಣದ ಕಿರೀಟದಂತಿರುವ ಕೋಟೆಯ ನವೀಕರಣ ಮತ್ತು ಅಭಿವೃದ್ಧಿ ಕುರಿತು ಹೋರಾಟಗಾರರು, ಇತಿಹಾಸ ತಜ್ಞರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ದನಿ ಎತ್ತುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೆ ಅಭಿವೃದ್ಧಿಗೆ ಕಾಲ ಕೂಡಿ ಬಾರದೆ ನನೆಗುದಿಗೆ ಬೀಳುತ್ತಲೇ ಬಂದಿದೆ.
ಈ ಬೆಳೆವಣಿಗೆಯ ನಡುವೆಯೇ, ಕಂದಾಯ ಇಲಾಖೆಯು ಅಂದಾಜು ₹103 ಕೋಟಿ ವೆಚ್ಚದಲ್ಲಿ ಕೋಟೆ ಅಭಿವೃದ್ಧಿಯ ಪ್ರಸ್ತಾವ ಸಿದ್ದಪಡಿಸಿದೆ. ಆ ವಿಷಯವು ಗುರುವಾರದ ಸಚಿವ ಸಂಪುಟ ಸಭೆಯ ಮುಂದೆ ಬರಲಿದ್ದು, ಆಡಳಿತಾತ್ಮಕ ಒಪ್ಪಿಗೆ ಸಿಗಲಿದೆ. ಇದರೊಂದಿಗೆ ಕೋಟೆಗೆ ಅಭಿವೃದ್ಧಿ ಭಾಗ್ಯ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ವಿಜಯನಗರದ ಅಚ್ಯುತರಾಯನಿಂದ ಮಾಗಡಿ ಪ್ರಾಂತ್ಯ ಜಹಗೀರಾಗಿ ಪಡೆದಿದ್ದ ಸಾಮಂತರಾಯ ಎಂಬ ಪಾಳೇಗಾರ ಸಾವನದುರ್ಗದ ನೆಲೆಯಿಂದ ಕ್ರಿ.ಶ 1543ರಿಂದ 1571ರವರೆಗೆ ಆಳ್ವಿಕೆ ನಡೆಸಿದ್ದ. ಸಂಪಾಜರಾಯ ಮತ್ತು ಚಿಕ್ಕರಾಯ, ಸಾವಂತರಾಯನ ಉತ್ತರಾಧಿಕಾರಿಗಳು. ಪುತ್ರ ಸಂತಾನವಿಲ್ಲದ ಚಿಕ್ಕರಾಯನನ್ನು ಮೂಲೆಗುಂಪು ಮಾಡಿದ ಗುಡೇಮಾರನಹಳ್ಳಿ ಪಾಳೇಗಾರ ತಳಾರಿ ಗಂಗಪ್ಪನಾಯಕ ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ ಎನ್ನುತ್ತದೆ ಚರಿತ್ರೆ.
ಗಂಗಪ್ಪನಾಯಕ ವಿಜಯನಗರದ ಅಧಿಪತಿಗಳನ್ನು ಕ್ರಮೇಣ ವಿರೋಧಿಸತೊಡಗಿದ. ಆಗ, ವಿಜಯಪುರದ ದಂಡನಾಯಕ ರಣದುಲ್ಲಾಖಾನ್ ಬೆಂಗಳೂರು ವಶಪಡಿಸಿಕೊಂಡಿದ್ದ. ಮುಂದೆ ಇಮ್ಮಡಿ ಕೆಂಪೇಗೌಡ ಬೆಂಗಳೂರಿನಿಂದ ನೆಲೆಪಟ್ನದಲ್ಲಿ ತಳಾರಿ ಗಂಗಪ್ಪನಾಯಕನನ್ನು ಕೊಂದು ಸಾವನದುರ್ಗ ವಶಪಡಿಸಿಕೊಂಡ. ಮಾಗಡಿಯ ಮಣ್ಣಿನ ಕೋಟೆ ಹೊರಮೈಗೆ ಕಲ್ಲುಗಳನ್ನು ಕಟ್ಟಿಸಿದ. ಕೋಟೆ ಒಳಗೆ ಕೋಟೆ ರಾಮೇಶ್ವರಸ್ವಾಮಿ, ಶ್ರೀಕೃಷ್ಣ ದೇವಾಲಯ, ಅರಮನೆ ಕಟ್ಟಿಸಿದ ಇಮ್ಮಡಿ ಕೆಂಪೇಗೌಡ ಕ್ರಿ.ಶ. 1638ರವರೆಗೆ ಆಳ್ವಿಕೆ ನಡೆಸಿದ ಎನ್ನುತ್ತವೆ ದಾಖಲೆಗಳು.
ಹಿಂದೆ ಅರ್ಧ ದುರಸ್ತಿಯಾಗಿತ್ತು: ‘ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಟೆ ದುರಸ್ತಿಗೆ ₹350 ಕೋಟಿ ಹಣ ಮಂಜೂರಾಗಿತ್ತು. ಆಗ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಅಧಿಕಾರಾವಧಿಯಲ್ಲಿ ಕೋಟೆ ದುರಸ್ತಿ ಕಾರ್ಯ ಅರ್ಧ ನಡೆಯಿತು. ಪ್ರಾಚ್ಯವಸ್ತು ಇಲಾಖೆ ವತಿಯಿಂದ ಕೋಟೆ ದುರಸ್ತಿಗೊಳಿಸಿದರೂ ಪೂರ್ಣಗೊಂಡಿಲ್ಲ’ ಎಂದು
ಕೋಟೆಗೆ ಸೇರಿದ್ದೆನ್ನಲಾದ ಜಾವು ಒತ್ತುವರಿಯಾಗಿದೆ. ಅಕ್ಕಪಕ್ಕದ ಜಾಗಗಳು ಕಸ ಸುರಿಯುವ ತಾಣವಾಗಿದ್ದು, ರಸ್ತೆಯಲ್ಲಿ ಸಾಗುವವರು ಮೂಗು ಹಿಡಿದು ಹೋಗಬೇಕಾದ ಸ್ಥಿತಿ ಇದೆ. ಕೆ–ಶಿಫ್ ರಸ್ತೆ ವಿಸ್ತರಣೆ ಕಾರಣಕ್ಕಾಗಿ ತಾಲ್ಲೂಕು ಆಡಳಿತ ಇತ್ತೀಚೆಗೆ ಕೋಟೆ ಕಂದಕ ಮುಚ್ಚಲು ಮುಂದಾಗಿತ್ತು. ಆಗ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸುಮ್ಮನಾಯಿತು.
ಭರವಸೆ ನೀಡಿದ್ದ ಡಿಸಿಎಂ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಗಡಿಗೆ 2023ರ ಅಕ್ಟೋಬರ್ನಲ್ಲಿ ಕೋಟೆಗೆ ಭೇಟಿ ನೀಡಿದ್ದರು. ಕೋಟೆಯ ಆವರಣದಲ್ಲಿ ಆಗ ಸಂಸದರಾಗಿದ್ದ ಸಹೋದರ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ಅವರೊಂದಿಗೆ ಸುತ್ತಾಡಿದ್ದ ಡಿಕೆಶಿ, ಕೋಟೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
‘ಬಾಯಿ ಮಾತಿಗೆ ಸೀಮಿತವಾಗದಿರಲಿ’
‘ಕೋಟಿ ಅಭಿವೃದ್ಧಿ ವಿಷಯ ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ. ನೂರರಿಂದ ಸಾವಿರ ಕೋಟಿವರೆಗೆ ಯೋಜನೆಗಳು ರೂಪುಗೊಂಡಿವೆ. ಆದರೆ ಕೋಟೆಯ ಚಹರೆ ಮಾತ್ರ ಬದಲಾಗಿಲ್ಲ. ಆಡಳಿತಗಾರರ ನಿರ್ಲಕ್ಷ್ಯದಿಂದಾಗಿ ದಿನದಿಂದ ದಿನಕ್ಕೆ ಕೋಟೆಯು ಅವಸಾನದ ಅಂಚಿಗೆ ಸರಿಯುತ್ತಲೇ ಇದೆ. ಕೋಟೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಅದರ ರೂಪುರೇಷೆಗಳ ಕುರಿತು ಚರ್ಚಿಸಲು ಜೂನ್ 20ರಂದು ಪೂರ್ವಭಾವಿ ಸಭೆ ಕರೆದಿದ್ದೇನೆ’ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಯರೂಪಕ್ಕೆ ಬಂದರಷ್ಟೇ ಖಾತ್ರಿ’
‘ಕೋಟೆಯನ್ನು ಅಭಿವೃದ್ಧಿಪಡಿಸಿದರೆ ಮಾಗಡಿ ಪಟ್ಟಣದ ಅತ್ಯುತ್ತಮ ಪ್ರವಾಸಿ ತಾಣವಾಗುತ್ತದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಕಳೆದೆರಡು ದಶಕದಿಂದ ನಿರಂತರವಾಗಿ ನಿರಾಶೆಯಾಗುತ್ತಲೇ ಇದೆ. ಹಾಗಾಗಿ ಯಾರೇ ಅಭಿವೃದ್ಧಿ ಮಾಡುತ್ತೇವೆ ಎಂದರೂ ಅದನ್ನು ನಂಬುವ ಸ್ಥಿತಿಯಲ್ಲಿ ತಾಲ್ಲೂಕಿನ ಜನರಿಲ್ಲ. ಮಾಗಡಿಯ ಕೆಂಪೇಗೌಡರ ಕುರುಹಾಗಿರುವ ಕೋಟೆ ಅಭಿವೃದ್ಧಿಗೆ ಯಾಕೆ ಗ್ರಹಣ ಹಿಡಿದಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಆ ಗ್ರಹಣ ಬಿಡಿಸಿ ನಿಜವಾಗಿಯೂ ಕೋಟೆ ಅಭಿವೃದ್ಧಿಗೊಳಿಸಲಿ. ನಮ್ಮ ಪೂರ್ವಿಕರ ಕುರುಹನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಕೊಡುವ ಕೆಲಸವಾಗಲಿ’ ಎಂದು ತಾಲ್ಲೂಕಿನ ಇತಿಹಾಸ ತಜ್ಞ ಡಾ. ಮುನಿರಾಜಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.