ADVERTISEMENT

ಮಾಗಡಿ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:40 IST
Last Updated 2 ಮಾರ್ಚ್ 2026, 4:40 IST
<div class="paragraphs"><p>ಮಾಗಡಿ ತಾಲ್ಲೂಕಿನ ಕರಲಮಂಗಲ ಗ್ರಾಮದಲ್ಲಿ ‘ಯೂತ್ ಫಾರ್ ಪರಿವರ್ತನ್’ ಮತ್ತು ‘ಅಕ್ಸೆಲ್‌ಆಲ್ಫಾ’ ಕಂಪನಿಯ ಸಹಯೋಗದೊಂದಿಗೆ ನವೀಕರಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು&nbsp;</p></div>

ಮಾಗಡಿ ತಾಲ್ಲೂಕಿನ ಕರಲಮಂಗಲ ಗ್ರಾಮದಲ್ಲಿ ‘ಯೂತ್ ಫಾರ್ ಪರಿವರ್ತನ್’ ಮತ್ತು ‘ಅಕ್ಸೆಲ್‌ಆಲ್ಫಾ’ ಕಂಪನಿಯ ಸಹಯೋಗದೊಂದಿಗೆ ನವೀಕರಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು 

   

ಮಾಗಡಿ: ‘ಪೋಷಕರು ತಮ್ಮ ಮಕ್ಕಳಿಗೆ ಹಣ-ಆಸ್ತಿ ಮಾಡುವ ಬದಲು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ರೂಪಿಸುವುದು ಇಂದಿನ ಅಗತ್ಯ’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಕರಲಮಂಗಲ ಗ್ರಾಮದಲ್ಲಿ ‘ಯೂತ್ ಫಾರ್ ಪರಿವರ್ತನ್’ ಮತ್ತು ‘ಅಕ್ಸೆಲ್‌ಆಲ್ಫಾ’ ಕಂಪನಿ ಸಹಯೋಗದೊಂದಿಗೆ ನವೀಕರಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕೊರತೆ ನಿವಾರಿಸುವುದು ಸರ್ಕಾರದ ಮತ್ತು ಸಮಾಜದ ಜವಾಬ್ದಾರಿ. ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ₹6 ಲಕ್ಷ ಸಂಗ್ರಹಿಸಿ ಶಾಲೆ ನವೀಕರಿಸಿರುವ ಯೂತ್ ಫಾರ್ ಪರಿವರ್ತನ್‌ ತಂಡದ ಕಾರ್ಯ ಶ್ಲಾಘನೀಯ. ಶೌಚಾಲಯಗಳ ಸ್ವಚ್ಛತೆ ಆಸ್ಪತ್ರೆ ಆಪರೇಷನ್ ಥಿಯೇಟರ್‌ನಷ್ಟೇ ಮುಖ್ಯ ಎಂದು ಪ್ರತಿಪಾದಿಸಿದರು.

ರಾಜ್ಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಸುಮಾರು 79 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿವಿಧ ಇಲಾಖೆಗಳಲ್ಲಿ ಒಟ್ಟು 2.85ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಸರ್ಕಾರ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಅವರು,‘ನಾನು ಏಳನೇ ತರಗತಿವರೆಗೆ ಓದಿದ್ದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ. ಇವತ್ತು ದೊಡ್ಡ ಮಟ್ಟದ ವಿಜ್ಞಾನಿಗಳು, ವೈದ್ಯರು ಮತ್ತು ಅಧಿಕಾರಿಗಳು ಸರ್ಕಾರಿ ಶಾಲೆಗಳಿಂದಲೇ ಬಂದಿದ್ದಾರೆ. ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಯುವುದು ತಪ್ಪಲ್ಲ. ಆದರೆ, ಇಂಗ್ಲಿಷ್ ಮಾತನಾಡಿದವರು ಮಾತ್ರ ಬುದ್ಧಿವಂತರು ಎಂಬ ಭ್ರಮೆ ಬೇಡ’ ಎಂದರು.

ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಎಚ್‌ಪಿವಿ ಲಸಿಕೆ ಯೋಜನೆಯನ್ನು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. ಜಯದೇವ ಆಸ್ಪತ್ರೆ ಮಾದರಿಯಲ್ಲೇ ಸರ್ಕಾರಿ ಸೇವೆಗಳು ಬಲಗೊಂಡರೆ ಖಾಸಗಿ ಕ್ಷೇತ್ರದ ದುಬಾರಿ ವೆಚ್ಚ ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅರೇನಹಳ್ಳಿ, ಮಸಾಲಾ ಚಾಯಿ ಮೀಡಿಯಾದ ಶಿವಪ್ರಕಾಶ್, ಯೂತ್ ಫಾರ್ ಪರಿವರ್ತನ್ ಸಂಸ್ಥಾಪಕ ಅಮಿತ್, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.