ಚನ್ನಪಟ್ಟಣ: ಸುಗ್ಗಿಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ತಾಲ್ಲೂಕಿನ ಜನತೆ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಮಂಗಳವಾರ ಪಟ್ಟಣದಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಡಗರ ಸಂಭ್ರಮದಿಂದ ಖರೀದಿಸಿದರು.
ಜನರಲ್ಲಿ ಉತ್ಸಾಹ ಇತ್ತು, ಆದರೆ, ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರಿಗೆ ಹಬ್ಬ ಕಹಿಯಾಗಿ ಪರಿಣಮಿಸಿದೆ. ಹಬ್ಬದ ವಿಶೇಷ ಎಂಬಂತೆ ಹೂವು, ಎಳ್ಳು, ಬೆಲ್ಲ, ಕಡಲೆಕಾಯಿ, ಸಕ್ಕರೆ ಅಚ್ಚು, ಅವರೆಕಾಯಿ, ಕಬ್ಬು ಮತ್ತಿತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ಎಳ್ಳು ಪ್ರತಿ ಕೆ.ಜಿ.ಗೆ ₹130, ಸಕ್ಕರೆ ಅಚ್ಚು ಕೆ.ಜಿ.ಗೆ ₹100 ರಿಂದ 120, ಬೆಲ್ಲ ₹60, ಹೂವು ಒಂದು ಕೆ.ಜಿ. ಕನಕಾಂಬರ ₹ 800, ಮಲ್ಲಿಗೆ ₹2,400, ಸೇವಂತಿಗೆ ₹160, ಕಾಕಡ ₹600, ಬಾಳೆ ಹಣ್ಣು ಕೆ.ಜಿ.ಗೆ ₹70, ಕಡಲೆಕಾಯಿ ಸೇರಿಗೆ ₹30 ರಿಂದ 35, ಗೆಣಸು ಕೆ.ಜಿ.ಗೆ ₹40 ರಿಂದ 50, ಕಬ್ಬು ಎರಡಕ್ಕೆ ₹80 ರಿಂದ 100, ಅವರೆಕಾಯಿ ಕೆ.ಜಿ.ಗೆ ₹40 ಇತ್ತು. ಈ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿತ್ತು.
ಹಬ್ಬದ ಕಾರಣ ಹೆಚ್ಚು ವ್ಯಾಪಾರವಾಗುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಅವರೆಕಾಯಿ, ಗೆಣಸು, ಕಬ್ಬು ಬಂದು ಬಿದ್ದಿವೆ. ಪಟ್ಟಣದ ತುಂಬೆಲ್ಲ ಜನವೋ ಜನ ಕಂಡುಬಂದರು. ಬೆಲೆ ಏರಿಕೆಯ ನಡುವೆಯೂ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.