ರಾಮನಗರ: ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಶಿವನಂಜಯ್ಯ ಅವರ ಬೆನ್ನಿಗೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನಿಂತಿದೆ. ಯಾವುದೇ ಕಾರಣಕ್ಕೂ ಅಧ್ಯಕ್ಷರನ್ನು ಬದಲಿಸದೇ ಇರುವ ತೀರ್ಮಾನ ಕೈಗೊಂಡಿದೆ.
ಸಮ್ಮೇಳನವು ಇದೇ 23, 24ರಂದು ರಾಮನಗರದಲ್ಲಿ ನಡೆಯಲಿದೆ. ಅಧ್ಯಕ್ಷರನ್ನು ಬದಲಿಸುವಂತೆ ಕೋರಿ ಹಿಂದೂ ಜಾಗರಣಾ ವೇದಿಕೆಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜು ‘ಜನಾಭಿಪ್ರಾಯ ಒಗ್ಗೂಡಿಸಿಯೇ ಶಿವನಂಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಶಿವನಂಜಯ್ಯ ಅವರೊಬ್ಬ ಹಿರಿಯ ವಿಚಾರವಾದಿ. ದಶಕಗಳಿಂದ ಅವರನ್ನು ಬಲ್ಲೆ. ಅವರ ಬರಹಗಳನ್ನೂ ಓದಿದ್ದೇನೆ. ಅವರು ವೈಚಾರಿಕವಾಗಿ ಮಾತನಾಡುತ್ತಾರೆಯೇ ಹೊರತು ಎಂದೂ ಧರ್ಮ ವಿರೋಧಿ ಯೋಚನೆ ಮಾಡಿದವರಲ್ಲ. ಅವರ ನಿಲವನ್ನು ಪ್ರಶ್ನಿಸುವವರು ನನ್ನ ಬಳಿ ಬಂದರೆ ಆ ಬಗ್ಗೆ ತಿಳಿವಳಿಕೆ ನೀಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.