ರಾಮನಗರ: ವಿವಾಹ ವಾರ್ಷಿಕೋತ್ಸವ ದಿನದಂದೇ ಹೆಡ್ ಕಾನ್ಸ್ಟೆಬಲ್ ಒಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬಿಡದಿ–ಹಾರೋಹಳ್ಳಿ ಮುಖ್ಯ ರಸ್ತೆಯ ಕೆಂಪಶೆಟ್ಟಿದೊಡ್ಡಿ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ರಾಮನಗರ ತಾಲ್ಲೂಕಿನ ತಿಮ್ಮೇಗೌಡನದೊಡ್ಡಿ ನಿವಾಸಿ ಚಂದ್ರಶೇಖರ್ (37) ಮೃತರು. 2008ರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಕಾನ್ಸ್ಟೆಬಲ್ ಆಗಿ ಸೇವೆಗೆ ಸೇರಿದ್ದ ಅವರು ಹೆಡ್ ಕಾನ್ಸ್ಟೆಬಲ್ ಆಗಿ ಬಡ್ತಿ ಪಡೆದಿದ್ದರು. ಚಂದ್ರಶೇಖರ್ ಭಾನುವಾರ ಎಂದಿನಂತೆ ಬೈಕ್ನಲ್ಲಿ ಕೆಲಸಕ್ಕೆಂದು ಹಾರೋಹಳ್ಳಿಗೆ ತೆರಳಿದ್ದರು. ವಿವಾಹ ವಾರ್ಷಿಕೋತ್ಸವದ ಕಾರಣ ಮನೆಗೆ ಬೇಗ ಬರುವುದಾಗಿ ಮಡದಿಗೆ ಹೇಳಿದ್ದರು. ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ರಾಮನಗರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.
ಅವರಿಗೆ ಪತ್ನಿ ಪವಿತ್ರಾ, ಆರು ವರ್ಷದ ಪುತ್ರಿ ಆರೋಹಿ ಇದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.