ಮಾಗಡಿ: ಗುಬ್ಬಿಯಲ್ಲಿ ನಡೆಯುತ್ತಿರುವ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವೀಕ್ಷಣೆಗೆ ತಾಲ್ಲೂಕಿನ ಹಸಿರು ಸೇನೆ ಹಾಗೂ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗೋವಿಂದರಾಜ್ ನೇತೃತ್ವದಲ್ಲಿ ಸೋಮವಾರ ತೆರಳಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ.
ರೈತ ಸಂಘದವರು ತುಮಕೂರಿನ ಗುಬ್ಬಿಯಲ್ಲಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸ್ಥಗಿತಗೊಂಡಿರುವ ಸ್ಥಳ ವೀಕ್ಷಣೆ ತೆರಳುತ್ತಿದ್ದಾಗ ಕುಣಿಗಲ್ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಕ್ಷಕರು ತಡೆದಿದ್ದಾರೆ. ಅಲ್ಲಿನ ಸನ್ನಿವೇಶ ಸರಿಯಿಲ್ಲ, ನೀವು ಹೋಗಬಾರದು. ನಿಮ್ಮ ಸಮಸ್ಯೆಯನ್ನು ನಿಮ್ಮ ತಾಲ್ಲೂಕಿನಲ್ಲಿ ಸಭೆ ಕರೆದು ಬಗೆಹರಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಮಾಗಡಿಗೆ ಬರುವಂತ ಹೇಮಾವತಿ ನೀರನ್ನು ನ್ಯಾಯಯುತವಾಗಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ನಡೆಯುವ ಸ್ಥಳ ಉದ್ವಿಘ್ನ ಪರಿಸ್ಥಿತಿಯಲ್ಲಿದ್ದು, ಅಲ್ಲಿನ ಭೇಟಿ ನೀಡಿದರೆ ಸಮಸದತೆಗಳು ಉಲ್ಬಣವಾಗುತ್ತವೆ. ಹಾಗಾಗಿ ಸ್ಥಳಕ್ಕೆ ಹೋಗುವುದು ಬೇಡ ಎಂದು ಪೊಲೀಸರು ತಿಳಿಸಿದ ನಂತರ ರೈತರು ಮಾಗಡಿ ಹಿಂತಿರುಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ರೈತ ಸಂಘದ ಕುದೂರು ಹೋಬಳಿ ಅಧ್ಯಕ್ಷ ಮಂಜುನಾಥ್, ಕರ್ನಾಟಕ ಜನಪರ ರೈತ ಸಂಘಟನೆ ರಾಜ್ಯಾಧ್ಯಕ್ಷ ವೆಂಕಟೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.