ADVERTISEMENT

ರಾಮನಗರ ಭಾಗಶಃ ಬಂದ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 21:48 IST
Last Updated 29 ಸೆಪ್ಟೆಂಬರ್ 2023, 21:48 IST
ಕನಕಪುರದಲ್ಲಿ ಕರ್ನಾಟಕ ಯುವಶಕ್ತಿ ವೇದಿಕೆಯ ಶ್ರೀನಿವಾಸ್ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.  
ಕನಕಪುರದಲ್ಲಿ ಕರ್ನಾಟಕ ಯುವಶಕ್ತಿ ವೇದಿಕೆಯ ಶ್ರೀನಿವಾಸ್ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.     

ರಾಮನಗರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲೊಂದಾದ ರಾಮನಗರದಲ್ಲಿ ಶುಕ್ರವಾರ ಭಾಗಶಃ ಬಂದ್ ಆಗಿತ್ತು. ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲ್ಲೂಕು ಬಹುತೇಕ ಸ್ತಬ್ಧವಾಗಿದ್ದವು. ಮಾಗಡಿ ತಾಲ್ಲೂಕಿನಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಗಡಿ ಮತ್ತು ಕುದೂರಿನಲ್ಲಿ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿತ್ತು.

ನಾಲ್ಕು ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸಂಜೆವರೆಗೆ ಬಂದ್ ಆಗಿತ್ತು. ಸರ್ಕಾರಿ ಬಸ್‌ ಓಡಾಟವಿದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ವಾಹನಗಳ ಸಂಚಾರವೂ ಎಂದಿನಂತಿರಲಿಲ್ಲ.  

ಬಂದ್ ಅಂಗವಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕನ್ನಡಪರ, ರೈತ ಸಂಘಟನೆ, ವಿವಿಧ ಸಂಘ–ಸಂಸ್ಥೆಗಳು ಹಾಗೂ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆ ಮಾಡಿದರು. ಪ್ರಮುಖ ರಸ್ತೆಯನ್ನು ಕೆಲ ಹೊತ್ತು ತಡೆದು ಪ್ರತಿಭಟಿಸಿದರು. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಬೆಂಗಳೂರು–ಮೈಸೂರು ರಸ್ತೆ ಮತ್ತು ಕನಕಪುರದಲ್ಲಿ ಬೆಂಗಳೂರು–ಕನಕಪುರ ರಸ್ತೆ ತಡೆಯಲಾಗಿತ್ತು.

ADVERTISEMENT

ಕನಕಪುರದಲ್ಲಿ ಯುವಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಮುಕ್ಕಾಲು ಕಿಲೋ ಮೀಟರ್ ಉರುಳುಸೇವೆ ಮಾಡಿ, ತಲೆ ಬೋಳಿಸಿಕೊಂಡು ಪ್ರತಿಭಟಿಸುವ ಮೂಲಕ ಗಮನ ಸೆಳೆದರು. ರಾಮನಗರದಲ್ಲಿ ಸಂಘಟನೆಗಳ ಮುಖಂಡರು ಸಂಸದರ ಭಾವಚಿತ್ರಗಳೊಂದಿಗೆ, ಖಾಲಿ ಮಡಿಕೆ ಹಿಡಿದು, ಎಮ್ಮೆ ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ತುರ್ತು ಸೇವೆಗಳು ಅಬಾಧಿತವಾಗಿದ್ದವು.

ಕನಕಪುರದ ಕರ್ನಾಟಕ ಯುವಶಕ್ತಿ ವೇದಿಕೆಯ ಶ್ರೀನಿವಾಸ್ ಅವರು ಮುಕ್ಕಾಲು ಕಿ.ಮೀ. ಉರುಳು ಸೇವೆ ಮಾಡಿದರು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಬೆಂಗಳೂರು ವೃತ್ತದಲ್ಲಿ ಕನ್ನಡಪರ ಸಂಘಟನೆಯ ಕೃಷ್ಣೋಜಿರಾವ್ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.