ರಾಮನಗರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿವಿಧ ಪೆಟ್ರೋಲ್ ಬಂಕ್ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಕುರಿತು ಅಣಕು ಪ್ರದರ್ಶನದ ಮೂಲಕ ಪ್ರತಿಭಟನಾಕಾರರು ಗಮನ ಸೆಳೆದರು.
‘ಕೊರೊನಾ ಸೋಂಕಿತನೊಬ್ಬ ಆಸ್ಪತ್ರೆಗೆ ದಾಖಲಾಗಲು ಆಂಬುಲೆನ್ಸ್ ಮೂಲಕ ತೆರಳುತ್ತಿರುತ್ತಾನೆ. ಈ ವೇಳೆ ಆಂಬುಲೆನ್ಸ್ ಪೆಟ್ರೋಲ್ ಹಾಕಿಸಲು ಚಾಲಕ ಮುಂದಾಗುತ್ತಾನೆ. ಅವನ ಬಳಿ ಹಣ ಇಲ್ಲದೇ ಸೋಂಕಿತನನ್ನು ವಿಚಾರಿಸುತ್ತಾನೆ. ಈ ವೇಳೆ ಪೆಟ್ರೋಲ್ ದರ ಕೇಳಿ ಸೋಂಕಿತ ಸ್ಥಳದಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಾನೆ.. ಹೀಗೆ ಕಥೆಯ ಮೂಲಕವೇ ಸದ್ಯದ ಚಿತ್ರಣ ಬಿಚ್ಚಿಡುವ ಪ್ರಯತ್ನ
ನಡೆಯಿತು.
ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿ, ‘ರಾಜ್ಯದ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ₹100ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಜನಸಾಮಾನ್ಯರ ಬದುಕು ತತ್ತರಿಸಿದೆ. ಕೇಂದ್ರ ಸರ್ಕಾರ ಇನ್ನಾದರೂ ತೈಲ ಬೆಲೆಯನ್ನು ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.
ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ, ಲೀಟರ್ ಪೆಟ್ರೋಲ್ ₹65ಕ್ಕೆ ಲಭ್ಯವಾಗುತ್ತಿತ್ತು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಕೆ.ರಾಜು, ಮುಖಂಡರಾದ ಎ.ಬಿ. ಚೇತನಕುಮಾರ್, ಲೋಹಿತ್ ಬಾಬು, ರಮೇಶ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.