ADVERTISEMENT

ರಾಮನಗರದಲ್ಲಿ ತ್ರಿವಿಧ ದಾಸೋಹಿಯ ಸ್ಮರಣೆ

ವಿವಿಧೆಡೆ ಕಾರ್ಯಕ್ರಮ ಆಯೋಜನೆ: ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 14:14 IST
Last Updated 21 ಜನವರಿ 2021, 14:14 IST
ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ವೀರಶೈವ ಮುಖಂಡರು ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು
ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ವೀರಶೈವ ಮುಖಂಡರು ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು   

ರಾಮನಗರ: ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಜಿಲ್ಲೆಯ ವಿವಿಧೆಡೆ ಗುರುವಾರ ಭಕ್ತಿಭಾವದಿಂದ ನೆರವೇರಿತು.

ರಾಮನಗರದ ಹಳೇ ಬಸ್‍ನಿಲ್ದಾಣದಲ್ಲಿ ಜಿಲ್ಲೆಯ ವೀರಶೈವ ಸಂಘ ಸಂಸ್ಥೆಗಳ ವತಿಯಿಂದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಭಕ್ತರಿಗಾಗಿ ಪ್ರಸಾದ ವಿನಿಯೋಗ ನಡೆಯಿತು.

ವೀರಶೈವ ಮುಖಂಡ ರಾಜಶೇಖರ್ ಮಾತನಾಡಿ ‘ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಜ್ಞಾನ ದಾಸೋಹದ ಮೂಲಕ ಅವರ ಜೀವನದ ದಿಕ್ಕನ್ನೇ ಮಹಾಪುರುಷರು ಶಿವಕುಮಾರ ಶ್ರೀಗಳು. ಅವರು ದೈಹಿಕವಾಗಿ ಲಿಂಗೈಕ್ಯರಾಗಿದ್ದರೂ, ಅವರ ಸನ್ಮಾರ್ಗ, ಆದರ್ಶಗಳು ನಮ್ಮ ಜೊತೆಗಿವೆ. ಅವರು ತೋರಿದ ಹಾದಿಯಲ್ಲಿ ನಾವುಗಳು ನಡೆದು ಅವರ ಕಾಯಕ ನಿಷ್ಠೆ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ವೀರಶೈವ ಮುಖಂಡ ಕೇತೋಹಳ್ಳಿ ಕೆ.ಎಸ್. ಶಂಕರಯ್ಯ ಮಾತನಾಡಿ ‘ಸಿದ್ದಗಂಗಾ ಕ್ಷೇತ್ರವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿ ನಿತ್ಯವೂ ಬಡ ಜನರ ಸೇವೆ ಮಾಡಿ ತಮ್ಮ ಕಾಯಕ ನಿಷ್ಟೆಯನ್ನು ಜಗತ್ತಿಗೆ ಸಾರಿದ ಮಹಾಮಹಿಮರು ಈ ಶ್ರೀಗಳು. ಕೇಂದ್ರ ಸರ್ಕಾರ ಭಕ್ತರ ಅಪೇಕ್ಷೆಯಂತೆ ಅವರಿಗೆ ಭಾರತರತ್ನ ನೀಡಬೇಕು’ ಎಂದರು.

ರಾಮನಗರ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಮಾದಪ್ಪ, ಮುಖಂಡರಾದ ಎ.ಜೆ. ಸುರೇಶ್, ಆರ್.ವಿ. ಚಂದ್ರಶೇಖರ್, ಐಜೂರು ಜಗದೀಶ್, ಆರ್.ಎಂ.ಜಿ. ಗಿರೀಶ್, ವಿಭೂತಿಕೆರೆ ಶಿವಲಿಂಗಯ್ಯ, ಶಿವಕುಮಾರ್, ಜೈಕುಮಾರ್, ಗಂಗರಾಜನಹಳ್ಳಿ ಲೋಕೇಶ್, ಶಿವಶಂಕರಯ್ಯ, ಆಟೋ ರೇವಣಶಾಸ್ತ್ರಿ, ಅರ್ಚಕ ಮಹೇಶ್, ರೇವಣಸಿದ್ದಯ್ಯ, ನಾಗೇಶ್ ಮುಂತಾದವರಿದ್ದರು.

ವಿಭೂತಿಕೆರೆ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಶ್ರೀಗಳ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭ ಭಕ್ತರಿಗಾಗಿ ಅನ್ನ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.