ಶಾರ್ಟ್ ಸರ್ಕೀಟ್ ಆಗಿ ಸ್ತಬ್ಧಚಿತ್ರಕ್ಕೆ ಬೆಂಕಿ: ಭಯದಿಂದ ಓಡಿದ ಜನ
ರಾಮನಗರ: ನಗರದಲ್ಲಿ ನಡೆಯುತ್ತಿರುವ ರಾಮೋತ್ಸವದ ಎರಡನೇ ದಿನವಾದ ಶುಕ್ರವಾರ ರಾತ್ರಿ ಗ್ರಾಮದೇವತೆಗಳ ಮೆರವಣಿಗೆ ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭದಲ್ಲಿ, ಇಲ್ಲಿನ ಎಸ್ಪಿ ಕಚೇರಿ ವೃತ್ತದ ಬಳಿ ರಾತ್ರಿ 9.45ರ ಸುಮಾರಿಗೆ ಶಾರ್ಟ್ ಸರ್ಕೀಟ್ ಆಗಿ ಸ್ತಬ್ಧಚಿತ್ರವೊಂದಕ್ಕೆ ಬೆಂಕಿ ತಗುಲಿಕೊಂಡಿತು.
ಕೆಲವೇ ಕ್ಷಣಗಳಲ್ಲಿ ನೋಡ ನೋಡುತ್ತಿದ್ದಂತೆ ಸ್ತಬ್ಧಚಿತ್ರ ಹೊತ್ತಿಕೊಂಡು ಉರಿಯಿತು. ಸ್ಥಳದಲ್ಲಿದ್ದವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದವರು. ಉಳಿದ ಸ್ತಬ್ಧಚಿತ್ರಗಳ ವಾಹನಗಳ ಚಾಲಕರು ತಕ್ಷಣ ಬೆಂಕಿ ಹೊತ್ತಿಕೊಂಡಿದ್ದ ವಾಹನದಿಂದ ಸ್ವಲ್ಪ ದೂರಕ್ಕೆ ಹೋಗುವ ಮೂಲಕ ಅಪಾಯದಿಂದ ಪಾರಾದರು.
ಕೆಲವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೆ, ಅಷ್ಟೊತ್ತಿಗಾಗಲೇ ಸ್ತಬ್ಧಚಿತ್ರ ಬಹುತೇಕ ಸುಟ್ಟು ಹೋಗಿತ್ತು. ಘಟನೆಯಿಂದಾಗಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಗ್ರಾಮದೇವತೆಗಳು ಮೆರವಣಿಗೆ ಮತ್ತು ಸ್ತಬ್ಧಚಿತ್ರಗಳ ಪ್ರದರ್ಶನ ಮುಂದುವರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.