ADVERTISEMENT

ಕಾರ್ಖಾನೆ ಆರಂಭ: ಮುಷ್ಕರ ಮುಂದುವರಿಕೆ

ಕಾರ್ಮಿಕರ ಹೋರಾಟಕ್ಕೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‍ ಬೆಂಬಲ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 15:33 IST
Last Updated 19 ನವೆಂಬರ್ 2020, 15:33 IST
ರೈತ ಸಂಘದ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‍ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಟಿಕೆಎಂ ಯೂನಿಯನ್‌ ಅಧ್ಯಕ್ಷ ಪ್ರಸನ್ನ ಇದ್ದರು
ರೈತ ಸಂಘದ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‍ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಟಿಕೆಎಂ ಯೂನಿಯನ್‌ ಅಧ್ಯಕ್ಷ ಪ್ರಸನ್ನ ಇದ್ದರು   

ಬಿಡದಿ: ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಟೊಯೊಟಾ ಕಿರ್ಲೋಸ್ಕರ್‍ ಮೋಟಾರ್ಸ್‌ ಕಾರ್ಖಾನೆಯು ಲಾಕ್‌ಔಟ್‌ ಆದೇಶ ಹಿಂಪಡೆದಿದ್ದು, ಗುರುವಾರ ಬಾಗಿಲು ತೆರೆದಿದೆ. ಆದರೆ ಬಹುತೇಕ ಖಾಯಂ ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಿದ್ದು, ಕೆಲಸಕ್ಕೆ ಹಾಜರಾಗಿಲ್ಲ.

ಟೊಯೊಟಾ ಕಾರ್ಖಾನೆ ಲಾಕ್‌ಔಟ್ ಹಾಗೂ ಕಾರ್ಮಿಕರ ಮುಷ್ಕರ ಎರಡನ್ನೂ ನಿಷೇಧಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಪಾಳಿಯಿಂದಲೇ ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ಯವನ್ನೂ ಆರಂಭ ಮಾಡಿರುವುದಾಗಿ ಕಂಪನಿಯ ಆಡಳಿತ ಮಂಡಳಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಪಟ್ಟು ಬಿಡದ ಯೂನಿಯನ್‌:40 ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಬೇಕು. ಕಾರ್ಮಿಕರ ಬೇಡಿಕೆಗಳಿಗೆ ಒಪ್ಪಬೇಕು. ಅಲ್ಲಿಯವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ಕಾರ್ಮಿಕರ ಯೂನಿಯನ್‌ ಸ್ಪಷ್ಟಪಡಿಸಿದೆ.

ADVERTISEMENT

ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‍ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

"ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದ ಕಾರ್ಮಿಕರನ್ನು ಕಾರ್ಖಾನೆಯ ಆಡಳಿತ ಮಂಡಳಿಯು ಏಕಾಏಕಿ ಅಮಾನತು ಮಾಡಿರುವುದು ಅಮಾನವೀಯ ಕೃತ್ಯ. ಯಾವುದೇ ಕಾರಣಕ್ಕೂ ಕಾರ್ಮಿಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಅವರು ಭರವಸೆ ನೀಡಿದರು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಬೈರೇಗೌಡ ಹಾಗೂ ಮುಖಂಡರು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.