
ರಾಮನಗರ: ದೀರ್ಘ ಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ, ವಿಮಾ ಕಂತು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ಸೋಮವಾರ ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಆಯೋಜಿಸಲಾಗಿತ್ತು.
ನಾನಾ ಬ್ಯಾಂಕ್ಗಳಲ್ಲಿ ದಶಕಗಳಿಂದ ನಿಷ್ಕ್ರಿಯಗೊಂಡ ಹಾಗೂ ವಹಿವಾಟು ನಡೆಸದ ಖಾತೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 25 ಬ್ಯಾಂಕ್ಗಳಿಂದ 1,66,779 ಖಾತೆಗಳಲ್ಲಿ ₹48.69 ಕೋಟಿ ಹಣ ಕ್ಲೈಮ್ ಆಗಿಲ್ಲದ ಠೇವಣಿಗಳಿವೆ. ಇದನ್ನು ಕಾನೂನು ಬದ್ಧ ವಾರಸುದಾರರಿಗೆ, ಖಾತೆದಾರರಿಗೆ ವಾಪಸ್ ನೀಡಲು ‘ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ’ ಆರಂಭಿಸಲಾಗಿದೆ.
ಆರ್ಬಿಐ ನಿರ್ದೇಶನದಂತೆ ನಿಷ್ಕ್ರಿಯ ಖಾತೆ ವಾರಸುದಾರರು ಮೃತಪಟ್ಟು ಕಾನೂನು ಬದ್ಧ ಉತ್ತರಾಧಿಕಾರಿ ಇರದೆ ಇದ್ದರೆ ಖಾತೆದಾರರ ಮರಣ ಪ್ರಮಾಣ ಪತ್ರ, ಪಾಸ್ ಬುಕ್, ಗುರುತಿನ ಚೀಟಿ, ವಾರಸುದಾರರ ಪತ್ರ ಹಾಗೂ ಉತ್ತರಾಧಿಕಾರಿ ಒಬ್ಬರಿಗಿಂತ ಹೆಚ್ಚು ಜನರಿದ್ದರೆ ಯಾರಿಗೆ ಹಣ ಸಂದಾಯ ಮಾಡಬೇಕು ಎಂಬ ಕುರಿತು ಒಪ್ಪಿಗೆ ಪತ್ರ ನೀಡಬೇಕು. ಜತೆಗೆ ಕ್ಲೈಮ್ ಮಾಡುವ ವ್ಯಕ್ತಿಯ ವಿಳಾಸದ ಪುರಾವೆ ಮತ್ತು ಕೆವೈಸಿ ದಾಖಲೆ ಸಲ್ಲಿಸಬೇಕು. ಡಿಸೆಂಬರ್ ಅಂತ್ಯದವರೆಗೆ ಬ್ಯಾಂಕ್ಗಳಲ್ಲಿ ನಡೆಯುವ ಈ ಅಭಿಯಾನದಲ್ಲಿ ಎಲ್ಲ ಬ್ಯಾಂಕ್ಗಳು ಕನಿಷ್ಠ ನೂರು ಖಾತೆಗಳನ್ನಾದರೂ ಸಕ್ರಿಯಗೊಳಿಸಬೇಕು ಎಂಬ ಗುರಿ ನೀಡಲಾಗಿದೆ.
ಅಭಿಯಾನ ಕಾರ್ಯಕ್ರಮದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಧನರಾಜು, ಭಾರತೀಯ ರಿಸರ್ವ್ ಬ್ಯಾಂಕ್ನ ಜೀವಿಕಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ಮೋಹನ್ ಕುಮಾರ್, ಮೈಸೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಧಾಕೃಷ್ಣ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.