ರಾಮನಗರ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಖಂಡಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಐಜೂರು ವೃತ್ತದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಲ್ಯಾಪ್ಟಾಪ್ ಇಟ್ಟು ಪ್ರತಿಕೃತಿ ದಹಿಸಿದರು. "ಆನ್ಲೈನ್ ಶಿಕ್ಷಣ ಬೇಕು ಎಂದು ವರದಿ ಕೊಟ್ಟ ತಜ್ಞರಿಗೆ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತಜ್ಞರು ಆರಾಮವಾಗಿ ಮನೆಯಲ್ಲಿ ಕುಳಿತು ವರದಿ ಕೊಟ್ಟುಬಿಟ್ಟಿದ್ದಾರೆ. ಇದಕ್ಕೆ ಅತ್ಯಗತ್ಯವಾಗಿ ಲ್ಯಾಪ್ಟಾಪ್ ಬೇಕು. ಲ್ಯಾಪ್ಟಾಪ್ ಮತ್ತು ಅಗತ್ಯ ವ್ಯವಸ್ಥೆಗೆ ₨50 ಸಾವಿರ ವೆಚ್ಚವಾಗುತ್ತದೆ. ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಜನರು ಹಣಕ್ಕೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಹಣ ತರುವುದು ಎಲ್ಲಿಂದ’ ಎಂದು ವಾಟಾಳ್ ಪ್ರಶ್ನಿಸಿದರು.
"ರಾಜ್ಯ ಸರ್ಕಾರವು ಆನ್ಲೈನ್ ಶಿಕ್ಷಣ ಜಾರಿ ಮಾಡುವುದನ್ನು ಬಿಟ್ಟು ಮೊದಲು ಜನರ ಪ್ರಾಣ ಉಳಿಸಲಿ. ಈ ವಿಚಾರದಲ್ಲಿ ಎಚ್ಚರಗೊಳಿಸಲು ಇದೇ ಶನಿವಾರದಿಂದ ಪ್ರಾಣ ಉಳಿಸಿ ಚಳವಳಿಯನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ವೈದ್ಯರ ಕೊರತೆ ಇದೆ, ಸರ್ಕಾರ ಮೊದಲು ಅದನ್ನು ನೀಗಿಸಬೇಕು’ ಎಂದು ಆಗ್ರಹಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಬಾಯಿ, ಪ್ರಮುಖರಾದ ಸಿ.ಎಸ್.ಜಯಕುಮಾರ್, ಕೆ.ಜಯರಾಮು, ತ್ಯಾಗರಾಜ್, ಲೋಕೇಶ್, ಮರಿಸ್ವಾಮಿ, ಪಾರ್ಥಸಾರಥಿ, ಸುರೇಶ್ ಕೊತ್ತಿಪುರ, ನಾರಾಯಣ ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.