ADVERTISEMENT

ಮಾಗಡಿ: ವಿನಾಕಾರಣ ಜನರ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 3 ಮೇ 2021, 4:01 IST
Last Updated 3 ಮೇ 2021, 4:01 IST

ಮಾಗಡಿ: ತಾಲ್ಲೂಕಿನ ಗ್ರಾಮೀಣ ಪ್ರದೇಶ ಮತ್ತು ಪಟ್ಟಣದಲ್ಲಿ ವಾರದಿಂದ ಕೋವಿಡ್‌ ಸೋಂಕು ಉಲ್ಬಣವಾಗುತ್ತಿದೆ. ಸಾವಿನ ಸಂಖ್ಯೆಯು ಅಧಿಕವಾಗುತ್ತಿದೆ. ಸೋಂಕು ಉಲ್ಬಣವಾಗುತ್ತಿದ್ದರೂ ಸಹ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಜನಜಂಗುಳಿ ಸಹ ಕಡಿಮೆಯಾಗುತ್ತಿಲ್ಲ.

ತಾಲ್ಲೂಕಿನಲ್ಲಿ ಭಾನುವಾರ 127 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇಬ್ಬರು ಬಲಿಯಾಗಿದ್ದಾರೆ. ಕೋವಿಡ್‌ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಪೊಲೀಸರು ಕೋವಿಡ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರೂ ಸಹ ವಾಹನ ಸವಾರರು ವಿನಾಕಾರಣ ಸುತ್ತುತ್ತಿದ್ದಾರೆ.

ADVERTISEMENT

ಶಾಸಕ ಎ. ಮಂಜುನಾಥ್‌ ಅವರಿಗೆ ಸೋಂಕು ದೃಢಪಟ್ಟಿದ್ದರಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಮಹೇಶ್‌ ಎದೆನೋವಿನಿಂದ ಬಳಲುತ್ತಿದ್ದು, ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಮೂರ್ತಿ, ತಾ.ಪಂ ಇಒ ಟಿ. ಪ್ರದೀಪ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್‌, ಸಿಪಿಐ ಎ.ಎಂ. ಕುಮಾರ್‌ ಕೋವಿಡ್‌ ಹರಡದಂತೆ ನಿಗಾವಹಿಸಲು ಸುತ್ತುತ್ತಿದ್ದಾರೆ.

ಜನಪ್ರತಿನಿಧಿಗಳು ಮನೆ ಸೇರಿಕೊಂಡಿದ್ದಾರೆ. ಬಡವರ ನೆರವಿಗೆ ಮುಂದಾಗುತ್ತಿಲ್ಲ. ಸಂಕಟದ ಸಮಯದಲ್ಲಿ ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂಬುದು ಸಾರ್ವಜನಿಕರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.