ಮಾಗಡಿ ಪಟ್ಟಣದ ಟಿ.ಎಚ್.ಓ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಮಲೇರಿಯಾ ನಿರ್ಮೂಲನಾ ಘೋಷಣೆಯ ಲಿತೋಸ್ ಅನ್ನು ಡಿಎಂಓ ಡಾ.ಪದ್ಮಾವತಿ ಬಿಡುಗಡೆಗೊಳಿಸಿದರು.
ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಯಿತು.
ಪ್ರಸ್ತುತ ಮಲೇರಿಯಾ ಒಂದನೇ ಹಂತದಲ್ಲಿದ್ದೇವೆ. ಇದನ್ನು ಶೂನ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಡಿಎಂಒ ಡಾ.ಪದ್ಮಾವತಿ ತಿಳಿಸಿದರು.
ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ಗಣನೀಯ ಪ್ರಗತಿ ಸಾಧಿಸಿದೆ. 2027ರ ವೇಳೆಗೆ ಶೂನ್ಯಕ್ಕೆ ತರಲು ಮತ್ತು 2030ಕ್ಕೆ ಸಂಪೂರ್ಣ ನಿರ್ಮೂಲನೆ ಗುರಿ ಹೊಂದಿದ್ದೇವೆ ಎಂದರು.
ಜಿಲ್ಲೆಯಲ್ಲಿ ಮಲೇರಿಯಾ ರೋಗದಿಂದ ಯಾವುದೇ ಸಾವು-ನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪ್ರಭಾರ ಟಿಎಚ್ಒ ತನುಜಾ ಮಾತನಾಡಿ, ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಥಾದ ಮೂಲಕ ಅರಿವು ಮೂಡಿಸಲಾಗುತ್ತಿದೆ. 2030ರ ವೇಳೆಗೆ ಭಾರತ ಮಲೇರಿಯಾ ಮುಕ್ತವಾಗಬೇಕು. ಹಾಗಾಗಿ ಸೊಳ್ಳೆಗಳು ಉತ್ಪಾದನೆಯಾಗದಂತೆ ಕ್ರಮವಹಿಸಬೇಕು ಎಂದರು.
ಈ ವೇಳೆ ಮಲೇರಿಯಾ ನಿರ್ಮೂಲನಾ ಘೋಷಣೆಯ ಕರಪತ್ರ ಬಿಡುಗಡೆಗೊಳಿಸಿದರು. ಎಚ್.ಎಸ್.ವಿನಯ್, ಡಾ.ನಾಗರಾಜು ಉಪಾಧ್ಯಾಯ, ಡಾ.ಸುರೇಶ್, ಡಾ.ಬಸವರಾಜು, ಡಾ.ಮುರಳಿಮೋಹನ್, ಡಾ.ರಶ್ಮಿ, ಮಂಜುನಾಥ್, ಗುಣಶೇಖರ್, ಜಿ.ಮೋಹನ್, ಶಿವಸ್ವಾಮಿ, ಶಿವಕುಮಾರ್, ರಾಘವೇಂದ್ರ, ರಾಜಣ್ಣ, ಕುಮಾರ್, ಟಿಎಚ್ಒ ಕಚೇರಿ ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ನರ್ಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.