ADVERTISEMENT

ಜೋಗ ಜಲಪಾತದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹ 120 ಕೋಟಿ: ಬಿ.ವೈ. ರಾಘವೇಂದ್ರ 

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 13:16 IST
Last Updated 9 ಸೆಪ್ಟೆಂಬರ್ 2020, 13:16 IST
ಸಂಸದ ಬಿ.ವೈ. ರಾಘವೇಂದ್ರ
ಸಂಸದ ಬಿ.ವೈ. ರಾಘವೇಂದ್ರ    

ಶಿವಮೊಗ್ಗ: ಜೋಗ ಜಲಪಾತದ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 120 ಕೋಟಿ ನೀಡಿದೆ. ಪ್ರವಾಸಿಗರು ಜೋಗದ ತಾಣಗಳಲ್ಲಿ ಇಡೀ ದಿನ ಕಳೆಯಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಜೋಗದಲ್ಲಿ ಬುಧವಾರ ಜೋಗ ಅಭಿವೃದ್ಧಿ ನೀಲನಕ್ಷೆ ಕುರಿತು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಿರುವ ಸೌಲಭ್ಯ ಉತ್ತಮಪಡಿಸುವ ಜತೆಗೆ ಇನ್ನಷ್ಟು ಹೊಸ ಸೌಲಭ್ಯಗಳನ್ನು ಒದಗಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಜತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವೂ ಕೈಜೋಡಿಸಬೇಕು. ತಜ್ಞರ ಸಲಹೆ ಪಡೆದು ನೀಲನಕ್ಷೆ ಅಂತಿಮಗೊಳಿಸಿ, ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿದರು.

ADVERTISEMENT

ಇಲ್ಲಿನ 22 ಎಕರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನ, ವಿದ್ಯುದಾಗಾರ ವೀಕ್ಷಣೆಗೆ ಅವಕಾಶ, ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸುವ ಪ್ರಸ್ತಾವಗಳಿಗೆ ಅಂತಿಮ ರೂಪು ನೀಡಬೇಕು ಎಂದು ಸೂಚಿಸಿದರು.

ಕೆಪಿಟಿಸಿಲ್ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಮಾತನಾಡಿ, ಜೋಗದಲ್ಲಿ ಕೆಪಿಟಿಸಿಎಲ್‍ಗೆ ಸೇರಿದ ಹಲವು ಆಸ್ತಿಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪವರ್ ಸ್ಟೇಷನ್, ಆಸ್ಪತ್ರೆ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ್, ವಿಜಯ್ ಶರ್ಮ, ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳಾದ ರಾಜಪ್ಪ, ರವಿ, ಲಕ್ಷ್ಮೀನಾರಾಯಣ ಕಾಶಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.