ADVERTISEMENT

ಅಡಿಕೆ ಬೆಳೆ 15 ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತರಣೆ; ಗಂಗಾಧರ ನಾಯ್ಕ ಬಿ.

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:49 IST
Last Updated 5 ಫೆಬ್ರುವರಿ 2026, 2:49 IST
ತೀರ್ಥಹಳ್ಳಿಯ ರಾಮಕೃಷ್ಣಪುರದಲ್ಲಿ ನಡೆದ ರೈತ ದಿನಾಚರಣೆಯನ್ನು ಮ್ಯಾಮ್ಕೋಸ್‌ ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌ ಉದ್ಘಾಟಿಸಿದರು 
ತೀರ್ಥಹಳ್ಳಿಯ ರಾಮಕೃಷ್ಣಪುರದಲ್ಲಿ ನಡೆದ ರೈತ ದಿನಾಚರಣೆಯನ್ನು ಮ್ಯಾಮ್ಕೋಸ್‌ ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌ ಉದ್ಘಾಟಿಸಿದರು    

ತೀರ್ಥಹಳ್ಳಿ: ‘ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶ 9.5 ಲಕ್ಷ ಎಕರೆ ಪ್ರದೇಶದಲ್ಲಿದ್ದು, 2030ರ ವೇಳೆಗೆ 15 ಲಕ್ಷ ಎಕರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ತೆಲಂಗಾಣ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ’ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಂಗಾಧರ ನಾಯ್ಕ ಹೇಳಿದರು.

ಬುಧವಾರ ರಾಮಕೃಷ್ಣಪುರದ ಕುವೆಂಪು ರಂಗಮಂದಿರದಲ್ಲಿ ತಾಲ್ಲೂಕು ಕೃಷಿಕ ಸಮಾಜದಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ವಿಷಯದ ಕುರಿತು ಅವರು ಮಾತನಾಡಿದರು.

‘ಅಡಿಕೆ ರೋಗಗಳ ಕುರಿತಂತೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ವಿಜ್ಞಾನ ಪ್ರಗತಿಯಲ್ಲಿದ್ದು, ರೋಗ ನಿವಾರಣೆ ಕುರಿತು ಅಂದಾಜು ಮಾಡಲು ಸಾಧ್ಯವಿಲ್ಲ. ಸಂಶೋಧನೆಗಳ ದಾಖಲೆಗಳನ್ನು ಒದಗಿಸುವ ಸವಾಲು ಇದೆ. ವಾತಾವರಣ ಏರುಪೇರಿನಿಂದಾಗಿ ದೇಶದ ಎಲ್ಲ ಕೃಷಿ ಪದ್ಧತಿಯೂ ಏರುಪೇರಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಔಷಧ ಬಳಕೆಯಲ್ಲಿ ರಸಸಾರ ಮಟ್ಟ (ಪಿಎಚ್‌) ಗುರುತಿಸಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಕೊಳೆರೋಗ ನಿಯಂತ್ರಣ ಸಂಶೋಧನೆ ಅಂತಿಮ ಹಂತದಲ್ಲಿದೆ. ಬೋರ್ಡೋ ದ್ರಾವಣ ಬಳಕೆಯ ಬದಲಾಗಿ ಅಡಿಕೆ ಮರದ ಬುಡಕ್ಕೆ ಔಷಧ ಹಾಕುವ ಸಂಶೋಧನೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

‘ಅಡಿಕೆ ಎಲೆಚುಕ್ಕಿ ರೋಗವನ್ನು ಶಾಶ್ವತವಾಗಿ ಕೊನೆಗಾಣಿಸಲು ಸಾಧ್ಯವಿಲ್ಲ. ರೋಗದ ಪ್ರಭಾವವನ್ನು ಕಡಿಮೆಗೊಳಿಸಬಹುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸರಾಸರಿ ಮಟ್ಟದಲ್ಲಿ ಶೇ 17ರಷ್ಟು ಅಡಿಕೆ ಎಲೆಚುಕ್ಕಿ ರೋಗ ಕಡಿಮೆ ಆಗಿದೆ. ಜವಳು ಭೂಮಿಯಲ್ಲಿ ಚುಕ್ಕಿ ರೋಗ ಜೀವಂತವಾಗಿ ಹೆಚ್ಚು ಕಾಲ ಬದುಕುತ್ತದೆ. ಪರ್ಯಾಯ ಪದಾರ್ಥಗಳಿಗೆ ಅಡಿಕೆಯನ್ನು ಬಳಕೆ ಮಾಡುವ ಕಡೆಗೆ ಚಿಂತನೆ ನಡೆಸಬೇಕು. ಜಾನುವಾರುಗಳ ಆಹಾರ ಪದಾರ್ಥ ಕುರಿತಂತೆ ಚೀನಾ ಮಹತ್ವದ ಸಂಶೋಧನೆ ನಡೆಸಿದೆ’ ಎಂದು ಹೇಳಿದರು.

‘ಮ್ಯಾಮ್ಕೋಸ್‌ ವತಿಯಿಂದ ಪ್ರಯೋಗಾಲಯ ವರದಿ ಪಡೆದು ಗುಣಮಟ್ಟದ ಮೈಲುತುತ್ತ ಸರಬರಾಜು ಮಾಡಲಾಗುತ್ತಿದೆ. ಔಷಧೀಯ ಗುಣಮಟ್ಟವನ್ನು ಸಾರ್ವಜನಿಕವಾಗಿ ತಿಳಿಸಲು ನಾವು ಸಿದ್ಧರಿದ್ದೇವೆ’ ಎಂದು ಮ್ಯಾಮ್ಕೋಸ್‌ ಉಪಾಧ್ಯಕ್ಷ ಹುಲ್ಕುಳಿ ಮಹೇಶ್‌ ಹೇಳಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೊಸಮನೆ ಸತೀಶ್‌, ಕೆ.ಜೆ.ನಿರಂಜನ, ಕೆ.ಎ.ವಸುಪಾಲ, ತನಿಕಲ್‌ ರಾಜಣ್ಣ, ಕೆ.ಗುಣಕರ ಅಪ್ಪು ಶೆಟ್ಟಿ, ಕಡಿದಾಳು ತಾರಾನಾಥ, ಸಿ.ಬಿ.ಈಶ್ವರ್‌, ಹುಂಚದಕಟ್ಟೆ ವೆಂಕಟೇಶ್‌, ಪ್ರಗತಿಪರ ಕೃಷಿಕ ಕೊಳಕೊಡಿಗೆ ಸತ್ಯಪ್ರಕಾಶ್‌, ಮಣ್ಣು ವಿಜ್ಞಾನಿ ನಿರಂಜನ ಕೆ.ಎಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.