ADVERTISEMENT

ಬಿಜೆಪಿ ಅಧಿಕಾರದಲ್ಲಿ ಅಡಿಕೆಗೆ ಅಪರಾಧಿ ಸ್ಥಾನ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 14:10 IST
Last Updated 29 ಜನವರಿ 2021, 14:10 IST

ಶಿವಮೊಗ್ಗ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಡಿಕೆಯ ಮಾನ ನಿರಂತರವಾಗಿ ಹರಾಜಾಗುತ್ತಿದೆ. ಸರ್ಕಾರದ ಕೃಷಿ ಮಾರುಕಟ್ಟೆ ವೆಬ್‌ಸೈಟ್‌ನಲ್ಲೇ ಅಡಿಕೆಯನ್ನು ಮಾದಕ ವಸ್ತುಗಳ ಸ್ಥಾನದಲ್ಲಿಡಲಾಗಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ ಬಿ.ಎ.ರಮೇಶ್‍ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ ಬೆಳೆಗಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದ್ರೋಹ ಮಾಡುತ್ತಿವೆ. ಅಡಿಕೆಗೆ ಹಿಂದೂ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನವಿದೆ. ಇದು ಮಾದಕ ವಸ್ತು ಹೇಗಾಗುತ್ತದೆ? ಇದಕ್ಕೆ ಉತ್ತರವನ್ನು ರಾಜ್ಯ ಸರ್ಕಾರವೇ ನೀಡಬೇಕು. ಪಟ್ಟಿಯಿಂದ ವಾಪಸ್‌ ಪಡೆಯಬೇಕು. ಕೃಷಿ ಸಚಿವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

2001ರಲ್ಲಿ ವಾಜಪೇಯಿ ಸರ್ಕಾರ ಪಿ.ರಾಮಭಟ್ಟರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿಯು ಅಡಿಕೆ ಹಾನಿಕರ. ಸೇವಿಸಿದರೆ ಕ್ಯಾನ್ಸರ್ ಬರುತ್ತೆ ಎಂದು ವರದಿ ನೀಡಿತ್ತು. ಅಂದಿನಿಂದ ಆರಂಭವಾದ ಅಡಿಕೆ ಮೇಲಿನ ತಾತ್ಸರ ಈಗಲೂ ಮುಂದುವರಿದಿದೆ. ಸುಪ್ರಿಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪು ಇನ್ನು ತೂಗುಗತ್ತಿಯಲ್ಲಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಅಡಿಕೆ ಹಾನಿಕರ ಅಲ್ಲ ಎಂದು ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಆರೋಪಿಸಿದರು.

ADVERTISEMENT

2014ರಲ್ಲಿ ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಅಡಿಕೆ ಬೆಳೆಗೆ ರಕ್ಷಣೆ ನೀಡಬೇಕು ಎಂದು ಪ್ರಧಾನಮಂತ್ರಿ ಅವರನ್ನು ಒತ್ತಾಯಿಸಿದ್ದರು. ಅವರ ಮನವಿಯನ್ನೇ ಕಸದ ಬುಟ್ಟಿಗೆ ಎಸೆಯಲಾಗಿದೆ. ಇದು ಕೇಂದ್ರ ಸರ್ಕಾರ ಅಡಿಕೆ ಬೆಳೆಗೆ ಕೊಡುವ ಗೌರವ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಅಡಿಕೆ ಬೆಳೆಗಾರರ ಸಂಘದ ಮುಖಂಡರಾದ ಜೆ.ಸುರೇಂದ್ರ, ನಿರಂಜನ್, ಇಕ್ಕೇರಿ ರಮೇಶ್, ಎಚ್.ಎನ್.ವೆಂಕಟೇಶ್, ಬಸವಾನಿ ಪುಟ್ಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.