
ಸಾಗರ: ಛಲವಾದಿ ಸಮುದಾಯವು ಜ.1 ರಂದು ಬೆಳಿಗ್ಗೆ 11 ಕ್ಕೆ ಶಿವಮೊಗ್ಗದ ವಿದ್ಯಾನಗರದಲ್ಲಿರುವ ಛಲವಾದಿ ಸಮುದಾಯ ಭವನದಲ್ಲಿ ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಛಲವಾದಿ ಮಹಾಸಭಾದ ಪ್ರಮುಖರಾದ ಎನ್. ಲಲಿತಮ್ಮ ತಿಳಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯಲು ಸ್ಫೂರ್ತಿ ನೀಡಿದ ಪ್ರಮುಖ ಸಂಗತಿಗಳಲ್ಲಿ ಭೀಮಾ ಕೊರೆಗಾಂವ್ ವಿಜಯ ಕೂಡ ಒಂದಾಗಿದೆ. ಈ ಘಟನೆಯ ಹಿನ್ನಲೆ, ವಿದ್ಯಮಾನಗಳ ಕುರಿತು ಇಂದಿನ ತಲೆಮಾರಿಗೆ ದಾಟಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪುಣೆ ಪ್ರದೇಶದಲ್ಲಿ ಪೇಶ್ವೆಗಳ ದೊಡ್ಡ ಸೈನ್ಯದ ಜೊತೆ ಕೊರೆಗಾಂವ್ ವೀರರು ಅವಿರತವಾಗಿ ಹೋರಾಟ ನಡೆಸಿ ಎರಡನೇ ಬಾಜಿರಾಯನ ಮಗನನ್ನು ಕೊಂದ ನೆನಪಿಗೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಕ್ರೂರ ಜಾತಿ ಪದ್ದತಿ, ಅಸ್ಪೃಶ್ಯತೆಯ ನಡುವೆಯೂ ದಲಿತರು ನಡೆಸಿದ ಹೋರಾಟ ಅಂಬೇಡ್ಕರ್ ಅವರ ಬದುಕಿಗೆ ತಿರುವು ಕೊಟ್ಟ ಸಂಗತಿಯಾಗಿದೆ ಎಂದರು.
ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು, ಪ್ರೊ. ರಾಚಪ್ಪ, ಪ್ರೊ. ಕುಂದನ್ ಬಸವರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ನಾರಾಯಣ ಮಂಡಗಳಲೆ, ನಾಗರಾಜ್, ಚಂದ್ರಶೇಖರ್, ನಾರಾಯಣ ಅರಮನೆ ಕೇರಿ, ಹರೀಶ್, ಭಾಸ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.