ADVERTISEMENT

ಬಿಟ್‌ ಕಾಯಿನ್‌ ಆರೋಪ ಕಾಂಗ್ರೆಸ್‌ನ ಖಾಲಿ ಡಬ್ಬಿ: ಈಶ್ವರಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 12:24 IST
Last Updated 13 ನವೆಂಬರ್ 2021, 12:24 IST
   

ಶಿವಮೊಗ್ಗ: ಬಿಟ್‌ ಕಾಯಿನ್ ವಿಷಯದಲ್ಲಿ ಕಾಂಗ್ರೆಸ್‌ ನಾಯಕರು ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ. ಸದ್ದೇನೋ ಜೋರಾಗಿ ಬರುತ್ತಿದೆ. ಆದರೆ, ಒಳಗೆ ಏನೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಟ್‌ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವ ನಾಯಕ, ಪದಾಧಿಕಾರಿಯೂ ಇಲ್ಲ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರೂ ಇಲ್ಲ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ಒಂದು ತುಣುಕು ಕಾಗದದ ದಾಖಲೆ ನೀಡಲಿ ಎಂದು ಸವಾಲು ಎಸೆದರು.

ADVERTISEMENT

ಕಾಂಗ್ರೆಸ್‌ ಮುಖಂಡರಿಗೆ ಮಾಡಲು ಕೆಲಸವಿಲ್ಲ. ಹೀಗೆ ಮಾಡಿ ಅಧಿಕಾರ ಕಳೆದುಕೊಂಡರು. ಈಗ ಬಿಟ್‌ ಕಾಯಿನ್‌ ವಿಷಯ ಪ್ರಸ್ತಾಪಿಸುತ್ತಾ ಇರುವ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ ಎಂದು ಕುಟುಕಿದರು.

ಸಚಿವನಾಗಿರುವವರೆಗೂ ಪುತ್ರನಿಗೆ ಅವಕಾಶ ಇಲ್ಲ:

ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೇಳಿಲ್ಲ. ತಾವು ಸಚಿವ ಸ್ಥಾನದಲ್ಲಿ ಇರುವವರೆಗೂ ಶಾಸಕ, ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುವುದಿಲ್ಲ. ಈ ವಿಷಯ ಹೈಕಮಾಂಡ್‌ ಗಮನಕ್ಕೂ ತಂದಿರುವೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.