ADVERTISEMENT

ಬಿಜೆಪಿಯಿಂದ ಯೋಧರಿಗೆ ಅವಮಾನ: ಮಧು ಬಂಗಾರಪ್ಪ ವಾಗ್ದಾಳಿ

ಬಿಳವಾಣಿ ಗ್ರಾಮದಿಂದ ನಡೆದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:38 IST
Last Updated 12 ಆಗಸ್ಟ್ 2022, 5:38 IST
ಸೊರಬದಲ್ಲಿ ಕಾಂಗ್ರೆಸ್ ವತಿಯಿಂದ ಗುರುವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು.
ಸೊರಬದಲ್ಲಿ ಕಾಂಗ್ರೆಸ್ ವತಿಯಿಂದ ಗುರುವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು.   

ಸೊರಬ: ‘ಶತ, ಶತಮಾನಗಳ ಕಾಲ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ವೀರ ಯೋಧರಿಗೆ ಅವಮಾನ ಮಾಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿಧ್ವಜವನ್ನು ಹಾರಿಸುವುದಾಗಿ ಘೋಷಿಸಿದರು. ಈಗ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ನಾಟಕವಾಡಿದ್ದಾರೆ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಬಿಳವಾಣಿ ಗ್ರಾಮದಿಂದ ಪಟ್ಟಣದವರೆಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಯತರ್ಕರೊಂದಿಗೆ ಪಾದಯಾತ್ರೆ ನಡೆಸಿ, ನಂತರ ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ, ದೀನ ದಲಿತರ ಪರ ಅನುಷ್ಠಾನಗೊಂಡ ಸಂವಿಧಾನವನ್ನು ತಿರುಚುವ ಹೀನ ಮನಸ್ಥಿತಿ ಹೊಂದಿರುವ ಬಿಜೆಪಿ ನಾಯಕರು, ದೇಶದ ಏಕತೆ ಹಾಗೂ ಸಾರ್ವಭೌಮತೆ ಕಾಪಾಡುವ ಬದಲು ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ಬ್ರಟಿಷರಗಿಂತಲೂ ಕನಿಷ್ಠ ಆಡಳಿತ ನಡೆಸಿ ಜನರನ್ನು ಹಿಂಸಿಸುತ್ತಿದೆ ಎಂದು ದೂರಿದರು.

ADVERTISEMENT

ರಾಜ್ಯ ಹಾಗೂ ಕೇಂದ್ರ ಸರ್ಕಾರದ ದುರಾಡಳಿತ ನೀತಿ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದ್ದು, ವರಿಷ್ಠರ ಜೊತೆ ಚರ್ಚಿಸಿ ಶಿವಮೊಗ್ಗದಿಂದಲೇ ಮೊದಲು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.

ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕ ಮಹಾಲಿಂಗಪ್ಪ, ಶಿವಮೂರ್ತಿ, ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಘಟಕದ ಅಧ್ಯಕ್ಷ ಆರ್.ಸಿ.ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ, ಗೋಣಿ ಮಾಲತೇಶ್, ಎಚ್.ಗಣಪತಿ, ಎಂ.ಡಿ.ಶೇಖರ್, ಕೆ.ಪಿ.ಗೌಡ, ಶ್ರೀಧರ್ ಹುಲ್ತಿಕೊಪ್ಪ, ಕಲ್ಲಪ್ಪ ಭಾಗವಹಿಸಿದ್ದರು.

***

ಆರತಿ ಬೆಳಗಿದ ಮಹಿಳೆಯರು
ತಾಲ್ಲೂಕಿನ ಬಿಳವಾಣಿ ಗ್ರಾಮದಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದ ಮಧು ಬಂಗಾರಪ್ಪ ಅವರಿಗೆ ಮಾರ್ಗಮಧ್ಯೆ ಕುಂಸಿ, ಚನ್ನಾಪುರ, ಬೆದವಟ್ಟಿ, ಉರಗನಹಳ್ಳಿ, ಶಾಂತಗೇರಿ, ಅಂಡಿಗೆ, ಮಾವಲಿ, ಕೊಡಕಣಿ ಗ್ರಾಮದಲ್ಲಿ ಹೆಣ್ಣು ಮಕ್ಕಳು ಕೈಗೆ ಕಂಕಣ ಕಟ್ಟಿ ಆರತಿ ಬೆಳಗಿದರು.

ಮಧು ಬಂಗಾರಪ್ಪ ಸಾವಿರಾರು ಕಾರ್ಯಕರ್ತ ರೊಂದಿಗೆ ದಾರಿಯುದ್ದಕ್ಕೂ ಟೀ, ಕಾಫಿ ಹಾಗೂ ಲಘು ಉಪಾಹಾರ ಸೇವಿಸುತ್ತ 15 ಕಿಲೋ ಮೀಟರ್‌ ಮಳೆಯಲ್ಲಿಯೇ ಹೆಜ್ಜೆಹಾಕಿ ಸಂಭ್ರಮಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.