ಶಿವಮೊಗ್ಗ: ‘ಬಿಜೆಪಿ ಸರ್ಕಾರದಲ್ಲಿ ಹಿಂದುಳಿದವರು, ಬಡವರ ಮಕ್ಕಳು ಮಾತ್ರ ಏಕೆ ಹತ್ಯೆಗೀಡಾಗುತ್ತಿದ್ದಾರೆ? ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರು ಯೋಚಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ ಹೇಳಿದರು.
‘ಬಡವರ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುತ್ತಿರುವ ಬಿಜೆಪಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಮತ್ತೆ ಅಧಿಕಾರಕ್ಕಾಗಿ ಧರ್ಮವನ್ನು ಮುಂದೆ ತಂದು ದ್ವೇಷ ಬೆಳೆಸುತ್ತಿದೆ. ಅಧಿಕಾರಕ್ಕಾಗಿ ಅರಾಜಕತೆಯನ್ನೇ ಸೃಷ್ಟಿಸುತ್ತಿದೆ. ಇಂತಹ ರಾಜಕೀಯವನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ರಾಮರಾಜ್ಯ ಮಾಡುತ್ತೇವೆ ಎಂದು ಹೊರಟವರು ಗೂಂಡಾರಾಜ್ಯ ಮಾಡಿದ್ದಾರೆ. ಇದುವರೆಗೂ ನಡೆದ ಘಟನೆಗಳಲ್ಲಿ ಕೊಲೆಯಾದವರು ಹಿಂದುಳಿದವರು, ದಲಿತರು, ಬಡವರ ಮಕ್ಕಳು. ಇಂತಹ ಸಾವಿನ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿರುವ ಬಿಜೆಪಿಯವರಿಗೆ ಕನಿಷ್ಠ ಕರುಣೆಯೂ ಇಲ್ಲ’ ಎಂದು ದೂರಿದರು.
‘ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನೆಯಲ್ಲಿ ಯಾರು ನೊಂದಿದ್ದಾರೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಸೇರಿ ರಾಜಕಾರಣಿಗಳ ಮಕ್ಕಳು ಸುರಕ್ಷಿತವಾಗಿಲ್ಲವೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರನ್ನು ಬೈಯುವುದು ಬಿಟ್ಟರೆ ಈಶ್ವರಪ್ಪ ಅವರಿಗೆ ಬೇರೆನೂ ಕೆಲಸ ಇಲ್ಲ. ಪಕ್ಷದ ಮುಖಂಡರು ಅದಕ್ಕಾಗಿಯೇ ನೇಮಿಸಿದ್ದಾರೆ. ಸಿದ್ದರಾಮಯ್ಯ ಆರ್.ಎಸ್.ಎಸ್ ಕಾರ್ಯಕರ್ತನ ದೂಳಿಗೂ ಸಮ ಅಲ್ಲ ಎಂದು ಈಶ್ವರಪ್ಪ ಟೀಕಿಸಿದ್ದಾರೆ. ಈ ಆರ್.ಎಸ್.ಎಸ್ ಏನು, ಅವರಿಂದ ದೇಶಕ್ಕೆ ಏನು ಒಳ್ಳೆಯದಾಗಿದೆ? ಅವರೇನು ತ್ಯಾಗ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಸೌಗಂಧಿಕಾ, ಇಕ್ಕೇರಿ ರಮೇಶ್, ಡಿ.ಸಿ. ನಿರಂಜನ್, ಚಂದನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.