ಶಿಕಾರಿಪುರ:ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಮಾರ್ಗ ಅವೈಜ್ಞಾನಿಕವಾಗಿದ್ದು, ಮಾರ್ಗ ಬದಲಾವಣೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗ ಬದಲಾಯಿಸಿ, ಶಿವಮೊಗ್ಗ–ಶಿಕಾರಿಪುರ–ಯಲವಿಗಿ ಮಾರ್ಗದಲ್ಲಿ ಮಾರ್ಗ ನಿರ್ಮಾಣ ಮಾಡಬೇಕು. ಈ ಮಾರ್ಗದಿಂದ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕಕ್ಕೆ ಸಂಪರ್ಕ ಸಿಕ್ಕಂತಾಗುತ್ತದೆ. ಶಿಕಾರಿಪುರ, ಉಡುಗಣಿ, ಬಳ್ಳಿಗಾವಿ, ತಾಳಗುಂದ, ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಆನವಟ್ಟಿ, ಕೋಟಿಪುರ, ಹಾನಗಲ್, ಬಂಕಾಪುರ–ಸವಣೂರು, ಎಲಿವಿಗಿ ಜಂಕ್ಷನ್ ಮೂಲಕ ಹುಬ್ಬಳಿ, ಕಾರವಾರ, ಗೋವಾ, ಬೆಂಗಳೂರು, ಗದಗ ಸೇರಿ ಹಲವು ನಗರಗಳಿಗೆ ರೈಲ್ವೆ ಸಂಪರ್ಕ ದೊರೆಯುತ್ತದೆ’ ಎಂದರು.
‘ಹಾವೇರಿ ಜಿಲ್ಲೆಯ ಯಲವಿಗೆ ರೈಲ್ವೆ ಮಾರ್ಗಕ್ಕೆ ₹ 650 ಕೋಟಿ ಮಂಜುರಾಗಿದ್ದು, ಈ ಮಾರ್ಗಕ್ಕೆ ಶಿಕಾರಿಪುರ ಮೂಲಕ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕು. ಇದರಿಂದ ವಾಣಿಜ್ಯ ಚಟುವಟಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಶಿಕಾರಿಪುರ–ರಾಣೆಬೆನ್ನೂರು ಮಾರ್ಗ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಆಮ್ ಆದ್ಮಿ ಪಾರ್ಟಿ ಮುಖಂಡ ಚಂದ್ರಕಾಂತ್ ರೇವಣಕರ್, ಜೆಡಿಎಸ್ ಮುಖಂಡ ಚಂದ್ರಪ್ಪ,ರೈತರಾದ ಗಂಗಾಧರ್ ಶೇಟ್, ರಸೂಲ್ ಸಾಬ್, ಮತ್ತಿಕೋಟೆ ನಾಗರಾಜ್, ಮಮತಾ, ಶಿವಲೀಲಾ, ಅಶೋಕ್, ಮಲ್ಲಿಕಾರ್ಜುನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.