ADVERTISEMENT

ಶಿವಮೊಗ್ಗ: ಆಸ್ತಿ ತೆರಿಗೆ ಹೆಚ್ಚಳಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 4:44 IST
Last Updated 1 ಜೂನ್ 2022, 4:44 IST
ಶಿವಮೊಗ್ಗದಲ್ಲಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ನೇತೃತ್ವದಲ್ಲಿ ಪಾಲಿಕೆ ಮುಂದೆಮಂಗಳವಾರ ಪ್ರತಿಭಟನೆ ನಡೆಸಿದರು.

ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ. ತೆರಿಗೆದಾರರ ಮೇಲೆ ಹೊರೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನೇ ಕಡೆಗಣಿಸಲಾಗಿದೆ. ತಕ್ಷಣವೇ ತೆರಿಗೆ ವಾಪಸ್ ಪಡೆಯಬೇಕು. ಹಳೆ ತೆರಿಗೆಯನ್ನೇ ಮುಂದುವರಿಸಬೇಕು ಎಂದು ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ನೀರು, ಆಸ್ತಿ ತೆರಿಗೆ ನಾಲ್ಕೈದು ಪಟ್ಟು ಹೆಚ್ಚಿಸಲಾಗಿದೆ. ₹ 10 ಸಾವಿರ ಕಟ್ಟುತ್ತಿದ್ದವರು ಈಗ ₹ 45 ಸಾವಿರ ಕಟ್ಟಬೇಕಿದೆ. ₹ 25 ಸಾವಿರ ಕಟ್ಟುತ್ತಿದ್ದವರು
₹ 1 ಲಕ್ಷ ಕಟ್ಟಬೇಕಿದೆ. ಎಸ್.ಆರ್. ದರ ಹೆಚ್ಚಿಸಿದಂತೆ ತೆರಿಗೆಯನ್ನೂ ಏರಿಕೆ ಮಾಡಲಾಗಿದೆ. ಸ್ವಂತ ಮನೆಯವರೂ ಕೂಡ ಬಾಡಿಗೆ ಮನೆಯವರಂತೆ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ದೂರಿದರು.

ADVERTISEMENT

ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ. ಮನಸ್ಸಿಗೆ ಬಂದಂತೆ ತೆರಿಗೆ ಏರಿಕೆ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿದೆ. ಶೇ 40 ಕಮಿಷನ್ ಎಲ್ಲಾ ಕಾಮಗಾರಿಗಳಲ್ಲೂ ಸಾಮಾನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಸುಲಭ ತೆರಿಗೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಎಚ್.ಸಿ. ಯೋಗೀಶ್, ರಮೇಶ್ ಹೆಗ್ಡೆ, ಮೆಹಖ್ ಶರೀಫ್, ಪಕ್ಷದ ಮುಖಂಡರಾದ ರಾಮೇಗೌಡ, ಎಚ್.ಪಿ. ಗಿರೀಶ್, ವಿಜಯಲಕ್ಷ್ಮಿ ಪಾಟೀಲ್, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಎನ್.ಡಿ. ಪ್ರವೀಣ್, ಪ್ರವೀಣ್, ಕುಮರೇಶ್, ಚಂದ್ರಶೇಖರ್, ದರ್ಶನ್, ಪುಷ್ಪಕುಮಾರ್, ರೇಷ್ಮಾ, ಸುಮಾ, ಲಕ್ಷ್ಮಿ, ತಬಸ್ಸುಮ್, ನಾಜೀಮಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.