
ಶಿವಮೊಗ್ಗ: ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಬದಲಿಗೆ ವಿಬಿ–ಜಿರಾಮ್ಜಿ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಮಂಗಳವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಮುಖಂಡರು ಗಾಂಧಿ ಮಾರ್ಗದಲ್ಲಿಯೇ ನಿರಶನ ನಡೆಸಿ ಗಮನ ಸೆಳೆದರು.
ಇಲ್ಲಿನ ಗಾಂಧಿ ಪಾರ್ಕ್ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಇಡೀ ದಿನ ಉಪವಾಸ ಕುಳಿತು ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟನೆ ದಾಖಲಿಸಿದರು. ಎಐಸಿಸಿ ಆದೇಶದಂತೆ ಬಣಗಳು, ಭಿನ್ನ ಹಾದಿಗಳು, ಗುಂಪುಗಳನ್ನು ಮರೆತು ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡರು. ಗಾಂಧಿ ಟೋಪಿ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿ ಮಿಂಚಿದರು.
ಶಾಂತಿಯ ಹಾದಿಯಲ್ಲಿ ನಡೆದು ಬಂದಿದ್ದ ಗಾಂಧಿ ಪ್ರತಿಮೆ ಎದುರು ದಿನವಿಡೀ ಹೋರಾಟ, ಕ್ರಾಂತಿಯ ಹಾಡುಗಳನ್ನು ಹಾಡುತ್ತಾ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮುಖಂಡರ ಹಾಡುಗಾರಿಕೆಗೆ ಕಲಾವಿದರು ಸಾಥ್ ನೀಡಿದರು.
‘ಗ್ರಾಮೀಣರ ಭಾವನೆ ಆಲಿಸದೇ ಕಾಯ್ದೆಯನ್ನು ಬಲವಂತವಾಗಿ ಹೇರಲು ಕೇಂದ್ರ ಸರ್ಕಾರ ಹೊರಟಿದೆ. ಅತಿವೃಷ್ಟಿ–ಅನಾವೃಷ್ಟಿ ಅನ್ನದೇ ಗ್ರಾಮೀಣರಿಗೆ ಕೆಲಸ ನೀಡಿ, ಅವರ ಸಂಕಷ್ಟಗಳನ್ನು ಪರಿಹರಿಸಲು ಪಾಲುದಾರನಾಗಿದ್ದ ನರೇಗಾ ಯೋಜನೆಯನ್ನು ಮಹಾತ್ಮ ಗಾಂಧಿ ಮೇಲಿನ ದ್ವೇಷಕ್ಕೆ ಬಿಜೆಪಿಯವರು ಮೊಟಕುಗೊಳಿಸಿದ್ದಾರೆ’ ಎಂದು ಕಿಡಿಕಾರಿದರು.
‘ಕೇಂದ್ರ ಸರ್ಕಾರ ಯೋಜನೆಯ ಹೆಸರನ್ನು ಬದಲಾಯಿಸುವುದು ಮಾತ್ರವಲ್ಲ, ಯೋಜನೆಯನ್ನು ಮರು ರೂಪಿಸುವುದಾಗಿ ಹೇಳುತ್ತಾ ನಾಟಕವಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಸಂಸತ್ನಲ್ಲಿ ಸೂಕ್ತ ಚರ್ಚೆಯಾಗದೇ, ರಾಜ್ಯಗಳ ಅಭಿಪ್ರಾಯ ಪಡೆಯದೇ ಈ ಬದಲಾವಣೆ ತರಲಾಗಿದೆ. ಹಳ್ಳಿಯನ್ನು ದೆಹಲಿಯಿಂದಲೇ ನಿಯಂತ್ರಣ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ಗ್ರಾಮ ಸ್ವರಾಜ್ಯಕ್ಕೆ ಇದೊಂದು ಗದಾಪ್ರಹಾರ’ ಎಂದು ದೂರಿದರು.
ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಚೇತನ್ಗೌಡ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ವೇತಾ ಬಂಡಿ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಹಾಪ್ಕಾಮ್ಸ್ ಅಧ್ಯಕ್ಷ ಸಂತೆಕಡೂರು ವಿಜಯಕುಮಾರ್, ಕೆಪಿಸಿಸಿ ಮುಖಂಡರಾದ ಶ್ರೀನಿವಾಸ ಕರಿಯಣ್ಣ, ನಾಗರಾಜ ಗೌಡ, ಎಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಎನ್.ರಮೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಡಿ.ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಶಂಕರಘಟ್ಟ, ಪ್ರಮುಖರಾದ ಕೆ.ರಂಗನಾಥ್, ಇಸ್ಮಾಯಿಲ್ ಖಾನ್, ಎಸ್.ಪಿ. ಶೇಷಾದ್ರಿ, ಎಸ್.ಟಿ. ಹಾಲಪ್ಪ, ಎಸ್.ಟಿ. ಚಂದ್ರಶೇಖರ್, ಪುಷ್ಪ ಶಿವಕುಮಾರ್, ವೈ.ಎಚ್. ನಾಗರಾಜ್, ಹರ್ಷಿತ್ಗೌಡ, ಎಚ್.ಪಿ. ಗಿರೀಶ್, ಖಲೀಂಪಾಷಾ, ಶಿವಕುಮಾರ್, ಮಂಜುನಾಥ್ ಬಾಬು, ಬಸವರಾಜ್, ವಿಶ್ವನಾಥ ಕಾಶಿ, ಅರ್ಚನಾ ನಿರಂಜನ್, ಸ್ಟೆಲ್ಲಾ ಮಾರ್ಟಿನ್, ಯಮುನಾ ರಂಗೇಗೌಡ, ನಾಜಿಮಾ ಭಾಗವಹಿಸಿದ್ದರು.
ಯಾರು ಏನೆಂದರು.. : ನರೇಗಾವನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಬೇಕು. ಗ್ರಾಮಗಳ ಸ್ವಯಂ ಆಡಳಿತ ಹಕ್ಕನ್ನು ಮರುಸ್ಥಾಪಿಸಬೇಕು. ನಮ್ಮದೇ ಯೋಜನೆ ನಮ್ಮದೇ ಆಡಳಿತ ನಮ್ಮದೇ ಉದ್ಯೋಗ ಎನ್ನುವ ಆ ಯೋಜನೆ ಮರು ಜಾರಿಯಾಗಬೇಕು ಆರ್.ಪ್ರಸನ್ನಕುಮಾರ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಯುಪಿಎ ಸರ್ಕಾರ ಇದ್ದಾಗ ಮಹಾತ್ಮಾಗಾಂಧಿ ಹೆಸರಲ್ಲಿ ಮನರೇಗಾ ಯೋಜನೆ ಜಾರಿಗೆ ತರಲಾಗಿತ್ತು. ಈಗ ಈ ಯೋಜನೆಯ ಸ್ವರೂಪ ಬದಲಾಯಿಸಿ ಗ್ರಾಮೀಣ ಜನರ ಉದ್ಯೋಗಾವಕಾಶ ಕಿತ್ತುಕೊಳ್ಳಲಾಗಿದೆ ಬಲ್ಕೀಶ್ ಬಾನು ವಿಧಾನ ಪರಿಷತ್ ಸದಸ್ಯೆ ನರೇಗಾ ತೆಗೆಯುವುದರಿಂದ ಕನಿಷ್ಠ ವೇತನದ ರಕ್ಷಣೆ ಇಲ್ಲದೇ ಗ್ರಾಮೀಣ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಅವರ ಶೋಷಣೆಯಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಮುಖವಾಗುತ್ತದೆ ಆಯನೂರು ಮಂಜುನಾಥ್ ಕೆಪಿಸಿಸಿ ವಕ್ತಾರ ನರೇಗಾ ತೆಗೆದು ಗ್ರಾಮ ಪಂಚಾಯಿತಿಗಳ ಅಧಿಕಾರ ಕಸಿದುಕೊಳ್ಳಲಾಗುತ್ತಿದೆ. ಪಂಚಾಯಿತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಮಾರ್ಪಟ್ಟು ಸದಸ್ಯರ ಅಧಿಕಾರವೇ ಮೊಟಕುಗೊಳ್ಳುತ್ತದೆ. ಇದು ಗ್ರಾಮೀಣರ ವಲಸೆಗೂ ಕಾರಣವಾಗುತ್ತದೆ ಎಚ್.ಎಸ್.ಸುಂದರೇಶ ಸೂಡಾ ಅಧ್ಯಕ್ಷ ಕೇಂದ್ರ ಸರ್ಕಾರ ತನ್ನ ಕೀಳುಮಟ್ಟದ ಹಾಗೂ ದ್ವೇಷದ ರಾಜಕಾರಣ ಬಿಡಲಿ. ಬಿಜೆಪಿಯವರಿಗೆ ಮೊದಲಿನಿಂದಲೂ ಗಾಂಧೀಜಿ ಕಂಡರೆ ಆಗುವುದಿಲ್ಲ. ಆದ್ದರಿಂದ ನರೇಗಾ ಕೈಬಿಡಲಾಗಿದೆ. ಜೊತೆಗೆ ತನ್ನ ಕ್ರಮವನ್ನು ಆ ಪಕ್ಷ ಸಮರ್ಥಿಸಿಕೊಳ್ಳುತ್ತಿದೆ. ಅದು ಸರಿಯಲ್ಲ ಜಿ.ಪಲ್ಲವಿ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.