ADVERTISEMENT

ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರ ಬರ!

ಕ್ಯಾಂಟೀನ್‌ಗಳ ಸಮೀಪ ತಿಂಡಿ ಗಾಡಿಗಳು, ಫುಡ್ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 9:45 IST
Last Updated 20 ಡಿಸೆಂಬರ್ 2019, 9:45 IST
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್   

ಶಿವಮೊಗ್ಗ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಸುದ್ದಿಯಾಗುತ್ತಿರುವ ಮಧ್ಯೆ ಜಿಲ್ಲೆಯ ಕ್ಯಾಂಟೀನ್‌ಗಳತ್ತ ಜನರು ಮುಖ ಮಾಡದೇ ಇರುವ ಸಂಗತಿಯೂ ಬಯಲಾಗಿದೆ.

ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆಊಟ, ಉಪಾಹಾರ ಒದಗಿಸಬೇಕು ಎಂಬ ಆಶಯದೊಂದಿಗೆ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದರು. ಜಿಲ್ಲೆಯಲ್ಲೂ6 ಕ್ಯಾಂಟೀನ್‌ಗಳು ಆರಂಭವಾಗಿದ್ದವು. ಶಿವಮೊಗ್ಗ ವಿನೋಬ ನಗರದ 60 ಅಡಿ ರಸ್ತೆ, ಎಪಿಎಂಸಿ, ಬಸ್‌ನಿಲ್ದಾಣ ಹಾಗೂ ಡಿಡಿಪಿಐ ಕಚೇರಿ ಆವರಣಹಾಗೂ ಭದ್ರಾವತಿಯಲ್ಲಿ 2 ಕ್ಯಾಂಟೀನ್‌ಗಳುಆರಂಭಗೊಂಡಿದ್ದವು.

ಅಂದಿನಿಂದ ಇಂದಿನವರೆಗೂ ಪ್ರತಿ ದಿನ ಬೆಳಗ್ಗೆ 7.30ರಿಂದ 9.30ರ ತನಕ ₹ 5ಕ್ಕೆಉಪಾಹಾರ, ಮಧ್ಯಾಹ್ನ 12.30ರಿಂದ 2.30 ಹಾಗೂ ರಾತ್ರಿ 7.30ರಿಂದ 9.30ರ ತನಕ ₹ 10ಕ್ಕೆ ಊಟ ವಿತರಿಸಲಾಗುತ್ತಿದೆ.ಆರಂಭದಲ್ಲಿ ಜನರು ಮುಗಿ ಬಿದ್ದು ಕಡಿಮೆ ದರದ ಗುಣಮಟ್ಟದ ಆಹಾರ ಸೇವಿಸುತ್ತಿದ್ದರು. ಸರ್ಕಾರ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತಲಾ 500 ಜನರಿಗೆ ಸೌಲಭ್ಯ ನಿಗದಿಪಡಿಸಿತ್ತು. ಆರಂಭದಲ್ಲಿ ಬಹುಬೇಗನೆ ಆಹಾರ ಪದಾರ್ಥ ಖಾಲಿಯಾಗುತ್ತಿತ್ತು. ಈಗ ಜನರಿಲ್ಲದೇ ಮಾಡಿದ ಆಹಾರವೂ ವ್ಯರ್ಥವಾಗುತ್ತಿವೆ.

ADVERTISEMENT

ಬೆಳಗ್ಗೆ ಕೂಲಿ ಕಾರ್ಮಿಕರು ಕೆಲಸಕ್ಕೆ, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೊರಡುವ ಧಾವಂತದಲ್ಲಿರುತ್ತಾರೆ. ಮಧ್ಯಾಹ್ನ ಮನೆಯಿಂದ ತೆಗೆದುಕೊಂಡು ಹೋಗಿರುವ ಉಪಾಹಾರವನ್ನೇ ಸೇವಿಸುತ್ತಾರೆ. ಸರ್ಕಾರಿ ರಜಾ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ. ಅಲ್ಲದೇ, ಕ್ಯಾಂಟೀನ್‌ಗಳ ಸಮೀಪ ಬೀದಿಬದಿ ತಿಂಡಿಗಾಡಿಗಳು, ಫುಡ್ ಕೋರ್ಟ್‌ಗಳು ಇವೆ. ಅಲ್ಲೂ ಕಡಿಮೆ ದರದಲ್ಲಿ ಆಹಾರ ಪದಾರ್ಥ ಸಿಗುತ್ತಿರುವ ಕಾರಣ ಜನರು ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಕ್ಯಾಂಟೀನ್‌ಗಳ ಗುತ್ತಿಗೆದಾರರು.

ಪ್ರಸ್ತುತ ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆಯ ಉಪಾಹಾರಕ್ಕೆ ಇಡ್ಲಿ, ಉಪ್ಪಿಟ್ಟು ಹಾಗೂ ರೈಸ್ ಬಾತ್ ನೀಡಲಾಗುತ್ತಿದೆ. ಇದನ್ನು ವಿಸ್ತರಿಸಿ ವಡೆ, ಚಪಾತಿ ಹಾಗೂ ರವಾ ಇಡ್ಲಿ, ದೋಸೆ ನೀಡಿದರೆ,ಟೀ ಅಥವಾ ಕಾಫಿ ದೊರಕುವಂತಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆಎನ್ನುತ್ತಾರೆ ಕೂಲಿ ಕಾರ್ಮಿಕ ಶೇಷಪ್ಪ.

ದಿನದಲ್ಲಿ ಕೇವಲಒಂದೆರಡುಗಂಟೆ ಕಾರ್ಯ ನಿರ್ವಹಿಸುವ ಬದಲು ಬೆಳಿಗ್ಗೆಯಿಂದ ರಾತ್ರಿ ತನಕ ಬಾಗಿಲು ತೆರೆಯಬೇಕು.ಸಬ್ಸಿಡಿ ದರದ ಟೋಕನ್ ಮುಗಿದ ನಂತರವೂ ಅದೇ ದರಕ್ಕೆ ಊಟೋಪಹಾರ ನೀಡಬೇಕು. ಆಗ ಜನರು ಅಲ್ಲಿಗೆ ಬರುತ್ತಾರೆ ಎನ್ನುವ ಮಾತು ಗ್ರಾಹಕರಿಂದ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.