ಶಿರಾಳಕೊಪ್ಪ: ಈ ಭಾಗದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ರಾಜ್ಯದ ಉದ್ದಗಲಕ್ಕೂ ಪರಿಚಯಿಸುವ ಉದ್ದೇಶದಿಂದ ತಾಳಗುಂದ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಘೋಷಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪುರಸಭೆಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನುಭವ ಮಂಟಪದ ಶೂನ್ಯಪೀಠಾಧ್ಯಕ್ಷ ಅಲ್ಲಮಪ್ರಭುಗಳ ಜನ್ಮಸ್ಥಳವಾದ ಬಳ್ಳಿಗಾವಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ರನ್ನಿಂಗ್ ಟ್ರಾಕ್, ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಗಾಗಿ ಶೆಡ್ ಹಾಗೂ ಪುಡ್ ಕೋರ್ಟ್ ನಿರ್ಮಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಧ್ವಜಾರೋಹಣ ನೆರವೇರಿಸಿದರು.
ಪುರಸಭೆ ಅಧ್ಯಕ್ಷ್ಯ ಮಂಜುಳಾ ಟಿ. ರಾಜು, ಉಪಾಧ್ಯಕ್ಷ ವಿಜಯಲಕ್ಷ್ಮಿ ರಟ್ಟಿಹಳ್ಳಿ ಲೋಕೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಕ್ಬೂಲ್ ಸಾಬ್, ಸದಸ್ಯರಾದ ಟಿ.ರಾಜು, ರಾಜೇಶ್ವರಿ ವಸಂತ, ಬಿ.ರಾಜಶೇಖರ್, ಮುದಾಸೀರ್, ಮಹಾಬಲ, ಶಾಂತಮ್ಮ, ಮಮತ, ತಸ್ಲಿಮಾ ಸುಲ್ತಾನ್, ಸಾಧೀಕ್, ಎಂ.ಆರ್.ರಾಘವೇಂದ್ರ, ನಾಮನಿರ್ದೇಶನ ಸದಸ್ಯರಾದ ಮಂಚಿ ಶಿವಣ್ಣ, ಪವನ್ ಕಲಾಲ್, ಇಂದುಧರ, ರವಿಶಾನ್ ಭಾಗ ಸೇರಿದಂತೆ ವಿವಿಧ ಸಂಘ, ಸಂಸ್ಥೆ ಪ್ರಮುಖರು ಇದ್ದರು.
ಮೊದಲ ಬಾರಿಗೆ ಸಂಸದರು ಭಾಗಿ: ಶಿರಾಳಕೊಪ್ಪದಲ್ಲಿ ಇದೇ ಮೊದಲ ಬಾರಿಗೆ ಸಂಸದ ಬಿ.ವೈ.ರಾಘವೇಂದ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಧ್ವಜಾರೋಹಣ ನೆರವೇರಿಸುವಂತೆ ಸಂಸದರನ್ನು ಆಹ್ವಾನಿಸಿದರು. ಆದರೆ, ಸಂಸದರು ಇದನ್ನು ತಿರಸ್ಕರಿಸಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಅಧಿಕಾರಿಗಳೇ ನೆರವೇರಿಸಬೇಕು ಎಂದರು. ಇಲ್ಲಿಯವರೆಗೂ ಅಧ್ಯಕ್ಷರೇ ಧ್ವಜಾರೋಹಣ ನೆರವೇರಿಸುವುದು ವಾಡಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.