ADVERTISEMENT

ಉಂಬ್ಳೆಬೈಲಿನಲ್ಲಿ ಮತ್ತೆ ಆನೆ ದಾಳಿ: ಭತ್ತ ನಾಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:24 IST
Last Updated 18 ಅಕ್ಟೋಬರ್ 2021, 5:24 IST
ಶಿವಮೊಗ್ಗ ತಾಲ್ಲೂಕಿನ ಉಂಬ್ಳೆಬೈಲು ಗ್ರಾಮದ ಚಂದ್ರಶೇಖರ ಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಭತ್ತ ಬೆಳೆ ಆನೆ ದಾಳಿಗೆ ತುತ್ತಾಗಿರುವುದು
ಶಿವಮೊಗ್ಗ ತಾಲ್ಲೂಕಿನ ಉಂಬ್ಳೆಬೈಲು ಗ್ರಾಮದ ಚಂದ್ರಶೇಖರ ಗೌಡ ಅವರ ಜಮೀನಿನಲ್ಲಿ ಬೆಳೆದಿದ್ದ ಭತ್ತ ಬೆಳೆ ಆನೆ ದಾಳಿಗೆ ತುತ್ತಾಗಿರುವುದು   

ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮೊದಲೇ ಭಾರೀ ಮಳೆಯಿಂದ ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಈಗ ಕಾಡಾನೆಗಳು ಕಾಟವೂ ಕೂಡ ಹೆಚ್ಚಾಗಿದೆ.ತಾಲ್ಲೂಕಿನ ಉಂಬ್ಳೆಬೈಲಿನಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಆನೆಗಳ ದಾಳಿಗೆ 20 ಎಕರೆ ಭತ್ತದ ಬೆಳೆ ಹಾನಿಯಾಗಿದೆ.

ಮಳೆಯಿಂದ ಹಾನಿಗೊಳಗಾಗಿ ಅಳಿದುಳಿದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶಪಡಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕಾಡಾನೆಗಳು ಭತ್ತ, ತೆಂಗಿನ ತೋಟ, ಬಾಳೆ ತೋಟಕ್ಕೆ ನುಗ್ಗಿವೆ. ಗ್ರಾಮದ ಚಂದ್ರಶೇಖರ ಗೌಡ, ಜಿ.ಆರ್‌. ಮಂಜಪ್ಪ, ರುಕ್ಮುಣಿ, ಯಲ್ಲಪ್ಪ ಗೌಡ ಸೇರಿ ಇತರೆ ಹಲವು ರೈತರ 20 ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಭತ್ತ ಬೆಳೆ ನಾಶವಾಗಿದೆ.

ADVERTISEMENT

ಕಾಡಾನೆ ಹಾವಳಿ ತಡೆಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಬೆಳೆ ಪರಿಹಾರ ನೀಡಿ, ಕಾಡಾನೆ ಹಾವಳಿ ತಡೆಗಟ್ಟಲು ರೈತರು ಒತ್ತಾಯಿಸಿದ್ದಾರೆ.

ಆನೆಗಳ ದಾಳಿ ಹೊಸದೇನಲ್ಲ:ಉಂಬ್ಳೆಬೈಲಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೊಸದೇನಲ್ಲ. ಅನೇಕ ಬಾರಿ ಕಾಡಾನೆಗಳು ಊರಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿವೆ. ಮೊನ್ನೆಯಷ್ಟೇ ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆರೆ ಗ್ರಾಮದ ಕೃಷಿಮೂರ್ತಿ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ದನ ಮತ್ತು ಕರು ಮೇಲೆ ಚಿರತೆ ದಾಳಿ ನಡೆಸಿತ್ತು. ಈ ಹಿಂದೆಯೂ ಆನೆಗಳು ಭತ್ತ, ಅಡಿಕೆ ಬೆಳೆ ಹಾನಿ ಮಾಡಿದ್ದವು.

ಮೂರು ವರ್ಷಗಳಿಂದ ಗ್ರಾಮದಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ನಿತ್ಯವೂ ಕಾಡಾನೆ ದಾಳಿಯಿಂದ ಜನರು ಕಂಗಲಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೆ ಕಾರ್ಯಾಚರಣೆ ಮೂಲಕ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡುತ್ತಾರೆ ಹೊರತು ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಕಾಡಿಗಟ್ಟಿದ ಆನೆಗಳು ಮತ್ತೆ ಬಂದು ಬೆಳೆ ಹಾನಿ ಮಾಡುತ್ತಿವೆ. ಆನೆಗಳ ಹಾವಳಿ ತಡೆಯುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮದ ಸಿ.ಅನಿಲ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.