ಸಾಗರ: ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ತಾಲ್ಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಬೇಕು. ಅಗತ್ಯ ಇಲ್ಲದವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಅವರು ಅರೆಬೆತ್ತಲೆ ಪಾದಯಾತ್ರೆ ನಡೆಸಿದರು.
ಹೊಸಂತೆ ಗ್ರಾಮದಿಂದ ತಹಶೀಲ್ದಾರ್ ಕಚೇರಿಯವರೆಗೆ ರಾಷ್ಟ್ರಧ್ವಜ ಹಿಡಿದು 20ಕಿ.ಮೀ. ಅರೆಬೆತ್ತಲೆ ಪಾದಯಾತ್ರೆ ನಡೆಸಿದ ಪ್ರೇಮನಾಥ್ ಅವರು ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಅವರಿಗೆ ಮನವಿ ಸಲ್ಲಿಸಿ, ತಮ್ಮ ಕುಟುಂಬದ ಪಡಿತರ ಚೀಟಿಯನ್ನೂ ರದ್ದುಪಡಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಸ್ವಾಮಿನಾಥ್ ಅವರಿಗೆ ಹೊಸ ಅಂಗಿ ಕೊಡಿಸಿ, ಬಸ್ ಚಾರ್ಜ್ಗೆ ವೈಯಕ್ತಿಕ ವಾಗಿ ಹಣ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ಆದರೆ ನಮ್ಮ ಮನೆಯಲ್ಲಿ ಸುಮಾರು ಒಂದು ಕ್ವಿಂಟಲ್ ಪಡಿತರ ಅಕ್ಕಿಯನ್ನು ಬಡವರಿಗೆ ಕೊಡಲು ಸಂಗ್ರಹಿಸಿ ಇಡಲಾಗಿತ್ತು. ಆದರೆ ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಅಕ್ಕಿಯನ್ನು ಕಾಳಸಂತೆಕೋರರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಈ ಕಾರಣ ಅರೆಬೆತ್ತಲೆಯಾಗಿ 20 ಕಿ.ಮೀ. ಪಾದಯಾತ್ರೆ ನಡೆಸಿ ನನ್ನ ಪಡಿತರ ಚೀಟಿಯನ್ನು ರದ್ದುಮಾಡುವಂತೆ ಮನವಿ ಮಾಡಿದ್ದೇನೆ. ಜೊತೆಗೆ ತಾಲ್ಲೂಕಿನ ಬೇರೆಬೇರೆ ಭಾಗದಲ್ಲಿ ಇಂತಹ ಅವ್ಯವಹಾರ ನಡೆಯುತ್ತಿದೆ. ಅಗತ್ಯ ಇಲ್ಲದವರ ಪಡಿತರ ಚೀಟಿಯನ್ನು ರದ್ದುಮಾಡಬೇಕು. ಪಡಿತರ ಅಕ್ಕಿಯನ್ನು ಖರೀದಿ ಮಾಡುವ ರೈಸ್ಮಿಲ್, ಅಂಗಡಿಯವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಸ್ವಾಮಿನಾಥ್ ಒತ್ತಾಯಿಸಿದರು.
ಸ್ವಾಮಿನಾಥ್ ಅವರ ಸಾಮಾಜಿಕ ಕಳಕಳಿ ಅನುಕರಣೀಯ. ಮನವಿಯಲ್ಲಿ ತಿಳಿಸಿರುವಂತೆ ನಾನು ಅವರ ಮನೆಗೆ ಹೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇನೆ. ಪಡಿತರ ಅಕ್ಕಿಯನ್ನು ಅಕ್ರಮ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.