ಶಿವಮೊಗ್ಗ: ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ 28ರಷ್ಟು ಮಾತ್ರ. ಇಂತಹ ಶೈಕ್ಷಣಿಕ ವಾತಾವರಣದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹು ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ ಎಂದು ಕರ್ನಾಟಕ ಸಮಗ್ರ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕಿ ಕೆ. ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸೋಮವಾರ ಆಯೋಜಿಸಲಾಗಿದ್ದ ‘ಪರಸ್ಪರ– 2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸಿರುವವರ ಸಂಖ್ಯೆ ತೀರಾ ಕಡಿಮೆ. ಯುವ ಪೀಳಿಗೆಗೆ ಬಾಹ್ಯ ಪ್ರಪಂಚದಲ್ಲಿ ಹಲವಾರು ಆಕರ್ಷಣೆಗಳಿವೆ. ಅವೆಲ್ಲವುಗಳನ್ನು ಮೀರಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮ ಗುರುತರ ಜವಾಬ್ದಾರಿ ನಿರ್ವಹಿಸಬೇಕಾಗಿದೆ’ ಎಂದರು.
‘ದೇಶದ ಯುವಪೀಳಿಗೆ ಇಂದು ಸಾಮಾಜಿಕ ಜಾಲತಾಣಗಳು, ಮತ್ತು ಯೋಜಿತ ಪ್ರಚಾರದ ಮಾಹಿತಿಯ ಮಹಾಪೂರದ ಪ್ರಭಾವಕ್ಕೆ ಒಳಗಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದೆ. ಮಾದಕ ವ್ಯಸನದಂತಹಾ ದುಷ್ಚಟಗಳಿಗೆ ಒಳಗಾಗಿ ಒಟ್ಟಾರೆ ಸಮಾಜ ದಾರಿ ತಪ್ಪುತ್ತಿದೆ. ಇಂತಹ ಸಂಕೀರ್ಣತೆಯನ್ನು ಮೀರಿದ ಜಾತ್ಯತೀತ, ಮತ್ತು ಸಮಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂರಕವಾದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ‘ವಿದ್ಯಾರ್ಥಿಗಳು ಪಡೆದುಕೊಳ್ಳುವ ಪದವಿಗಳಿಗೆ ಅರ್ಥ ಬರಬೇಕಾದರೆ ವಿಮರ್ಶಾತ್ಮಕ ಚಿಂತನೆ, ವೈಚಾರಿಕತೆ, ಮತ್ತು ವೈಜ್ಞಾನಿಕ ದೃಷ್ಟಿಕೋನ ಅತ್ಯವಶ್ಯಕ. ಅಂತಹ ವೈಚಾರಿಕ ವಾತಾವರಣ ನಿರ್ಮಿಸುವುದರತ್ತ ವಿಶ್ವವಿದ್ಯಾಲಯ ಗಮನ ಹರಿಸಲಿದೆ’ ಎಂದರು.
ಕುಲಸಚಿವ ಎ.ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್. ರಮೇಶ್, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ.ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Cut-off box - ಐಪಿಎಸ್ ಅಧಿಕಾರಿ ಭರತ್ಗೆ ಸನ್ಮಾನ ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಚಂದ್ರಶೇಖರ್ ಅವರ ಪುತ್ರ ಪ್ರಸ್ತುತ ಸಿಕ್ಕಿಂ ಕೇಡರ್ ನಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿರುವ ಸಿ. ಭರತ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.