
ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗೆ ಒತ್ತಾಯಿಸಿ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಕರುಣಾಕರ ಶೆಟ್ಟಿ ಸೋಮವಾರ ಸೈಕಲ್ ಜಾಥಾ ಆರಂಭಿಸಿದರು.
ತಾಲ್ಲೂಕಿನಲ್ಲಿನ 30 ಗ್ರಾಮ ಪಂಚಾಯಿತಿಗಳಿಗೆ ಸೈಕಲ್ ಮೂಲಕ ತೆರಳಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಗೊಂಡ ಜಾಥಾದ ಮೊದಲ ದಿನ ನಗರ ಹೋಬಳಿಯ ಯಡೂರು ಗ್ರಾಮ ಪಂಚಾಯಿತಿಯಿಂದ ಚಾಲನೆಗೊಂಡಿದೆ. ನಂತರ ಸುಳುಗೋಡು, ಖೈರಗುಂದ, ಅಂಡಗದೋದೂರು, ಕರಿಮನೆ, ನಗರ, ಅರಮನೆ ಕೊಪ್ಪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿದೆ.
ನಾಳೆ ಮಂಗಳವಾರ ಸಂಪೆಕಟ್ಟೆ, ನಿಟ್ಟೂರು, ಜೇನಿ, ಹೊಸನಗರ ಪಟ್ಟಣ ಪಂಚಾಯಿತಿಗಳಿಗೆ ಸೈಕಲ್ ಜಾಥ ತೆರಳಲಿದೆ.
ಇಂದು ನಡೆದ ಸೈಕಲ್ ಜಾಥಾದಲ್ಲಿ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಈಶ್ವರಪ್ಪ, ನಾಗೇಂದ್ರ, ಕಿಶೋರ್ ಮತ್ತಿತರರು ಸಾಥ್ ನೀಡಿದರು.
ಉತ್ತಮ ಸ್ಪಂದನೆ: ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ನಡೆಸುತ್ತಿರುವ ಸೈಕಲ್ ಜಾಥ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ. ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಸೈಕಲ್ ಜಾಥ ಆಗಮಿಸಿದಾಗ ನಾಗರಿಕರು, ಊರ ಪ್ರಮುಖರು, ರಾಜಕೀಯ ಮುಖಂಡರು ಜಾಥಾಕ್ಕೆ ಬೆಂಬಲ ನೀಡಿದ್ದಾರೆ. ಜಾಥ ಮೂಲಕ ಗ್ರಾಮ ಪಂಚಾಯಿತಿ ಬೇಟಿ ನೀಡಿದಾಗ ಅಲ್ಲಿನ ಅಧ್ಯಕ್ಷರು ಸದಸ್ಯರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿ ಸಭೆ ನಡೆಸಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ನಿರ್ಣಯ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಕರುಣಾಕರ ಶೆಟ್ಟಿ ಪ್ರಜಾವಾಣಿ ಪತ್ರಿಕೆಗೆ ತಿಳಿಸಿದರು.
ಚಿತ್ರ. ಹೊಸನಗರ ತಾಲ್ಲೂಕಿನ ಸುಳುಗೋಡು ಗ್ರಾಮ ಪಂಚಾಯಿತಿಗೆ ಸೈಕಲ್ ಜಾಥಾ ಆಗಮಿಸಿದಾಗ ಅಧ್ಯಕ್ಷೆ ಶ್ರುತಿ ಶೇಷಾದ್ರಿ ಪಂಚಾಯಿತಿ ನಿರ್ಣಯ ನೀಡಿ ಶುಭಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.