ಶಿವಮೊಗ್ಗ: ವಾಯುಸೇನೆ ನೇಮಕಾತಿ ರ್ಯಾಲಿ ಆರಂಭವಾಗುವ ಒಂದು ದಿನ ಮೊದಲೇ ಉದ್ಯೋಗಾಕಾಂಕ್ಷಿಯುವಕರ ದಂಡು ಶಿವಮೊಗ್ಗ ನಗರಕ್ಕೆ ಲಗ್ಗೆ ಇಟ್ಟಿದೆ.
ನೆಹರೂ ಕ್ರೀಡಾಂಗಣದಲ್ಲಿ ಜುಲೈ 17ರಿಂದ 22ರವರೆಗೆ 6 ದಿನಗಳು ನೇಮಕಾತಿ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಮಂಗಳವಾರವೇ ನಗರಕ್ಕೆ ಬಂದಿಳಿದಿದ್ದಾರೆ. ಅವರಿಗೆ ವಾಸ್ತವ್ಯಕ್ಕಾಗಿ ನ್ಯಾಯಾಲಯ ಸಂಕೀರ್ಣದ ಎದುರಿನ ಒಕ್ಕಲಿಗರ ಸಮುದಾಯ ಭವನ, ರೈಲು ನಿಲ್ದಾಣದ ಬಳಿ ಇರುವ ಕೆಇಬಿ ಸಮುದಾಯ ಭವನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ನೇಮಕಾತಿ ರ್ಯಾಲಿ ನಡೆಯುವ ನೆಹರು ಕ್ರೀಡಾಂಣದ ಬಳಿ ಸಾಕಷ್ಟು ಪ್ರಮಾಣದಲ್ಲಿ ಸಂಚಾರಿ ಟಾಯ್ಲೆಟ್ ಘಟಕ ಇರಿಸಲಾಗುತ್ತಿದೆ
ಮೊದಲ ದಿನ ಇಂಡಿಯನ್ ವಾಯುಸೇನಾಪೊಲೀಸ್ ಮತ್ತು ಅಟೊಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳಿಗೆ ಅನುಕೂಲಕ್ಕಾಗಿ ನೇಮಕಾತಿ ಸ್ಥಳದಲ್ಲಿ ಜೆರಾಕ್ಸ್ ಅಂಗಡಿ, ಛಾಯಾಚಿತ್ರ ತೆಗೆಯಿಸಿಕೊಳ್ಳಲು ವ್ಯವಸ್ಥೆ, ಪಾವತಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದೆ. ಹೆಸರು ನೊಂದಣಿಗೆ ಹಲವು ಕೌಂಟರ್ ತೆರೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.