
ಕೋಣಂದೂರು: ‘ಮಕ್ಕಳ ಮನದಲ್ಲಿ ಕನಸುಗಳನ್ನು ಬಿತ್ತಲು ಪ್ರತಿಭಾ ಪುರಸ್ಕಾರಗಳು ಪ್ರೇರಣೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಕೆ.ಶ್ರೀಪತಿ ಹಳಗುಂದ ಹೇಳಿದರು.
ಸಮೀಪದ ಹಲವನಹಳ್ಳಿಯ ಹೊನ್ನಮ್ಮದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಗತ್ತು ಗೆಲ್ಲಲು ಹೋಗಬೇಡ, ಮೊದಲು ಜನನಿಯನ್ನು ಗೆಲ್ಲು ಎಂಬ ಮಾತಿನಂತೆ ಹೆತ್ತ ತಾಯಿ ಮತ್ತು ತಾಯಿ ನಾಡನ್ನು ಖುಷಿಪಡಿಸುವ ಕೆಲಸ ನಮ್ಮಿಂದ ಆಗಬೇಕು. ಪ್ರತಿಭಾ ಪುರಸ್ಕಾರಗಳು ಹೆತ್ತೊಡಲನ್ನು ಸಂತೋಷಿಸುವ ಕೆಲಸ ಮಾಡುತ್ತದೆ. ಮೊದಲು ನಿಮ್ಮನ್ನು, ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರೀತಿಸಿ, ಅದು ನಿಮ್ಮನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಕನ್ನಡ ಭಾಷೆಗೆ ಅವಮಾನ ಆದಲ್ಲಿ ಅದನ್ನು ಪ್ರತಿಭಟಿಸುವ ಜವಾಬ್ದಾರಿ ನಮ್ಮದು’ ಎಂದರು.
ಅಗ್ರಹಾರ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಹಾಗೂ 37 ಬಾರಿ ರಕ್ತದಾನ ಮಾಡಿದ ಶಿವಕುಮಾರ್ ಕಂಪ ಅವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಹೊನ್ನಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೋಣಂದೂರು ಕೆ.ಆರ್.ಪ್ರಸಾದ್, ಕಸಾಪ ಹಿರಿಯ ಸದಸ್ಯ ಎಸ್.ಈ.ಅಶೋಕ್, ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ಸುಧಾಕರ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಬಿ.ಪ್ರಕಾಶ್, ಕಸಾಪ ಹೋಬಳಿ ಕಾರ್ಯದರ್ಶಿ ಈಶ್ವರ ನಾಯ್ಕ, ಅಶ್ವಿನಿ, ಹೊಸಕೊಪ್ಪ ಶಿವು, ಜಿತೇಂದ್ರ ಕುಮಾರ್, ಆದ್ಯ ಇದ್ದರು. ನಂತರ ಭಜನೆ ಹಾಗೂ ಅಂಟಿಗೆ ಪಿಂಟಿಗೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.