ಶಿವಮೊಗ್ಗ: ಅಳಿವಿನಂಚಿನಲ್ಲಿರುವ ಪಶ್ಚಿಮಘಟ್ಟದ ಕಪ್ಪೆ ಪ್ರಭೇದಗಳ ಉಳಿವಿಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಸಾಗರ ತಾಲ್ಲೂಕು ಮುಪ್ಪಾನೆ ನಿಸರ್ಗಧಾಮದಲ್ಲಿ ಡಿ.18, 19ರಂದು ‘ಕಪ್ಪೆ ಹಬ್ಬ’ ಆಯೋಜಿಸಿದೆ.
ಜೀವವೈವಿಧ್ಯತೆಯ ಪ್ರತೀಕ, ರೈತರ ಮಿತ್ರ ಕಪ್ಪೆಗಳ ಸಂತತಿ ಅಳಿವಿನತ್ತ ಸಾಗುತ್ತಿದೆ. ಅವುಗಳ ಸಂತತಿ ಸಂರಕ್ಷಿಸಲು ಹಮ್ಮಿಕೊಂಡಿರುವ ಹಬ್ಬದಲ್ಲಿ ಕಪ್ಪೆಗಳ ಕುರಿತು ವಿಚಾರ ಸಂಕಿರಣಗಳು, ಚರ್ಚೆ, ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಸಂಶೋಧನಾ ಪ್ರಬಂಧಗಳ ಮಂಡನೆ, ವಿವಿಧ ಪ್ರಭೇದಗಳು, ಸಂತಾನೋತ್ಪತ್ತಿ ಪ್ರಕ್ರಿಯೆ, ಕಪ್ಪೆಗಳ ಕೂಗು ಕುರಿತು ಮಾಹಿತಿ ದೊರಕಲಿವೆ.
ಬಿದಿರು ಕಪ್ಪೆಗಳು, ಕರಾವಳಿ ಸ್ಕಿಟರಿಂಗ್, ಕಾಮನ್ ಟೋಡ್, ಬುಲ್ ಫ್ರಾಗ್ ಕುರಿತು ವಿಶೇಷ ಮಾಹಿತಿ ವಿನಿಮಯ ನಡೆಯಲಿದೆ.
ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕು ಎಂದು ಪರಿಸರವಾದಿಗಳು, ತಜ್ಞರು ನಿರ್ಣಯ ಅಂಗೀಕರಿಸಲಿದ್ದಾರೆ. 18ರಂದು ಬೆಳಿಗ್ಗೆ 10ಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹಬ್ಬಕ್ಕೆ ಚಾಲನೆ ನೀಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.