ADVERTISEMENT

1ಲಕ್ಷ ಮತಗಳಿಂದ ಮಧು ಬಂಗಾರಪ್ಪ ಗೆಲುವು: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:20 IST
Last Updated 29 ಏಪ್ರಿಲ್ 2019, 12:20 IST
ಹೊಸನಗರ ತಾಲ್ಲೂಕು ಹೋಬಳಿ ಕೇಂದ್ರ ನಗರಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.
ಹೊಸನಗರ ತಾಲ್ಲೂಕು ಹೋಬಳಿ ಕೇಂದ್ರ ನಗರಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.   

ಹೊಸನಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 50 ಸಾವಿರದಿಂದ ಒಂದು ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಹೋಬಳಿ ಕೇಂದ್ರ ನಗರಕ್ಕೆ ಭೇಟಿ ಮಾಡಿ ಸಮಾಲೋಚಿಸಿದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಗೆ ಅನ್ಯಾಯ ಮಾಡಿದ್ದೇವೆ ಎಂಬ ಕೊರಗು ಕ್ಷೇತ್ರದೆಲ್ಲೆಡೆ ಇತ್ತು. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಒಂದು ಬಾರಿ ಬಿ.ವೈ.ರಾಘವೇಂದ್ರರಿಗೆ ಎರಡು ಬಾರಿ ಕ್ಷೇತ್ರದ ಜನ ಅವಕಾಶ ನೀಡಿದ್ದರು. ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಮಧುವನ್ನು ಬೆಂಬಲಿಸಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಯಡಿಯೂರಪ್ಪ ಮತ್ತು ರಾಘವೇಂದ್ರ ಸಂಸದರಾಗಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ. ಅಲ್ಲದೆ ಲೋಕಸಭೆಯಲ್ಲಿ ಜಿಲ್ಲೆಯ ಪರವಾಗಿ ಧ್ವನಿ ಎತ್ತಲು ವಿಫಲವಾಗಿದ್ದಾರೆ. ಹೊಸಬರಿಗೆ ಅವಕಾಶ ನೀಡಿದರೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂಬ ಆಶಯ ಮತದಾರರಲ್ಲಿ ಕಂಡುಬಂದಿದೆ ಎಂದರು.

ನಾವೇ ಲೀಡ್:

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೊರಬ, ಸಾಗರ, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಲೀಡ್ ಪಡೆಯಲಿದ್ದಾರೆ. ಇನ್ನುಳಿದಂತೆ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಸಂಸದರು ಸ್ಪಂದಿಸಿಲ್ಲ ಎಂಬ ಆರೋಪ ಇದ್ದು, ನಮ್ಮ ಸಾಧನೆ ಅಲ್ಲೂ ಉತ್ತಮವಾಗಿರಲಿದೆ ಎಂದು ಭವಿಷ್ಯ ನುಡಿದರು.

ನಾಯಕರಾಗುವಲ್ಲಿ ಮೋದಿ ವಿಫಲ:

ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿದ್ದರು ಎಂದು ಹೇಳಬಹುದಷ್ಟೆ. ಕೇವಲ ಬಿಜೆಪಿ ಪ್ರಧಾನಿಯಾಗಿ ಬಿಂಬಿಸಲು ಹೊರಟಿದ್ದರು. ಆದರೆ ಇಡೀ ದೇಶ ಎಲ್ಲಾ ವರ್ಗಗಳ ನಾಯಕರಾಗುವಲ್ಲಿ ವಿಫಲರಾಗಿದ್ದಾರೆ. ಅಭಿವೃದ್ಧಿಪರ ಮಾತನಾಡದೆ ಕೇವಲ ಜಾತಿ ಧರ್ಮ, ಭಾವನೆಗಳನ್ನು ಮುಂದಿಟ್ಟು ರಾಜಕಾರಣ ಮಾಡಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ಆರೋಪಿಸಿದರು.

ಮೋದಿ ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಯಾರು ಏನೇ ಸಮೀಕ್ಷೆ ಮಾಡಲಿ ಈ ಚುನಾವಣೆಯಲ್ಲಿ ಮೋದಿಗೆ ಹಿನ್ನಡೆ ಕಟ್ಟಿಟ್ಟಬುತ್ತಿ ಎಂದಿದ್ದಾರೆ.

ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರಶೆಟ್ಟಿ, ಸದಸ್ಯ ಹಿಲ್ಕುಂಜಿ ಕುಮಾರ್, ಪ್ರಮುಖರಾದ ಸಾದಗಲ್ ಅಂಬರೀಷ್, ನೂಲಿಗ್ಗೇರಿ ಅಬ್ಬಾಸ್, ರಾಮಕುಮಾರ ಭಂಡಾರಕರ್, ಸುಧಾಕರ ಶೆಟ್ಟಿ, ಕರುಣಾಕರ ಭಂಡಾರಿ, ಸೈಯದ್ ಮಹಮದ್, ಚಿಕ್ಕಪೇಟೆ ರಾಮಕೃಷ್ಣ, ಗಿರಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.