ಹೊಸನಗರ: ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ನನಸಾಗುವತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ದಿಟ್ಟ ಹೆಜ್ಜೆ ಇಟ್ಟಿದೆ. ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಇಂದು ಸಾಕಾರಗೊಳ್ಳುತ್ತಿದೆ’ ಎಂದು ಸಿಪಿಐ ಗುರಣ್ಣ ಎಸ್. ಹೆಬ್ಬಾಳ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲ್ಲೂಕು ನವಜೀವನ ವೇದಿಕೆ ಸಹಯೋಗದಲ್ಲಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಹಾಗೂ ವಿವಿಧ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಾನವನ ಹುಟ್ಟಿನಿಂದ ಅಂತ್ಯದವರೆಗೂ ಸಂಘ ಹಲವು ವಿನೂತನ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ನೂತನ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಗೂಡಿಸಿದೆ. ದುಶ್ಚಟ ಕುರಿತು ಜನಜಾಗೃತಿ ಮೂಡಿಸುವುದು. ಅಶಕ್ತರಿಗೆ ಹಲವು ಯೋಜನೆಗಳ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವ ಯೋಜನೆಯು ಶ್ಲಾಘನೀಯ’ ಎಂದರು.
ನಿವೃತ್ತ ಪ್ರಾಂಶುಪಾಲ ಮಾರ್ಷಲ್ ಶರಾಂ, ಗಾಂಧಿ ಅವರು ಬದುಕು ಹಾಗೂ ಹೋರಾಟ ಕುರಿತು ಉಪನ್ಯಾಸ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಜಿಲ್ಲಾಧ್ಯಕ್ಷ, ವಕೀಲ ಮೋಹನ್ ಜಿ. ಶೆಟ್ಟಿ ಮಾತನಾಡಿ, ‘ಸಮಾಜಮುಖಿ ಸೇವೆಗೆ ಧರ್ಮಸ್ಥಳ ಸಂಘಗಳ ಯೋಜನೆಯು ದಾರಿದೀಪವಾಗಿದೆ. ಸಮಾಜ ಕಟ್ಟುವ ಕೆಲಸ ನಮ್ಮಿಂದಲೇ ಆರಂಭವಾಗಬೇಕು’ ಎಂದರು.
ಯೋಜನಾಧಿಕಾರಿ ಆರ್. ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ನಾಗರತ್ನಾ, ದೇವೇಂದ್ರ, ಎನ್.ಆರ್. ದೇವಾನಂದ್, ಬಿಇಒ ಚೇತನಾ, ನಾರಾಯಣ ಕಾಮತ್, ಮುರಳೀಧರ ಶೆಟ್ಟಿ, ವಸಂತ ರಾಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.