ಶಿವಮೊಗ್ಗ: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಭಾನುವಾರ ಪೊಲೀಸರು ವಿವಿದೆಢೆ ಮಾಸ್ಕ್ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ ಮಾಸ್ಕ್ ಇಲ್ಲದೆ ರಸ್ತೆಗೆ ಇಳಿದವರಿಗೆ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಿದರು. ಸಾರ್ವಜನಿಕರು ಹಲವು ಕಾರಣಗಳನ್ನು ಹೇಳಿ ದಂಡದಿಂದ ದೂರ ಉಳಿಯುವ ಪ್ರಯತ್ನಗಳು ನಡೆಸಿದರೂ ಪೊಲೀಸರು ದಂಡ ವಿಧಿಸಿ ಕಳುಹಿಸಿದ್ದಾರೆ.
ಉಷಾ ನರ್ಸಿಂಗ್ ಹೋಮ್ ಸಿಗ್ನಲ್ ಬಳಿ, ಬಸ್ ನಿಲ್ದಾಣ, ಮಹಾವೀರ ವೃತ್ತ, ಗೋಪಿ ವೃತ್ತ, ಅಮೀರ್ ಅಹ್ಮದ್ ವೃತ್ತ, ಪೊಲೀಸ್ ಚೌಕಿ, ಆಲ್ಕೊಳ, ರೈಲು ನಿಲ್ದಾಣ ಕೆಇಬಿ ವೃತ್ತದಲ್ಲಿ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ, ಪಾಲಿಕೆ ಸಿಬ್ಬಂದಿ ಸೇರಿದಂತೆ ಹಲವರು ಇಂದು ಮಾಸ್ಕ್ಗಾಗಿ ದಂಡ ತೆತ್ತಿದ್ದಾರೆ. ಮಾಸ್ಕ್ ಧರಿಸದೆ ದ್ವಿಚಕ್ರವಾಹನದಲ್ಲಿ ಬಂದ ಸವಾರರು ದಂಡ ತೆತ್ತಿದ್ದಾರೆ.
ಇನ್ನು ಕೆಲವರು ಮಾಸ್ಕ್ ಧರಿಸದೆ ಜೇಬಿನಲ್ಲಿಟ್ಟುಕೊಂಡು ಬಂದು ಪೊಲೀಸರಿಗೆ ದಂಡ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡವರು ರಾಜಕಾರಣಿಗಳಿಗೂ ಹೀಗೆ ದಂಡ ಕಟ್ಟಿಸುತ್ತೀರ ಎಂದು ಪ್ರಶ್ನಿಸಿದರು.
ಒಂದೇ ದಿನ 517 ಪ್ರಕರಣ ದಾಖಲು
ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ ₹ 2 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದ ಪೊಲೀಸರು ಭಾನುವಾರ ಒಂದೇ ದಿನ 517 ಪ್ರಕರಣ ದಾಖಲಿಸಿ, ₹ 80,800 ದಂಡ ಸಂಗ್ರಹಿಸಿದ್ದಾರೆ.
ನಗರದ ವಿವಿಧ ವೃತ್ತಗಳಲ್ಲಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ, ಅಭಯ್ ಪ್ರಕಾಶ್, ತುಂಗಾ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ದೀಪಕ್, ಕೋಟೆ ಠಾಣೆ ಚಂದ್ರಶೇಖರ್, ಗ್ರಾಮಾಂತರ ಠಾಣೆಯ ಸಿಪಿಐ ಸಂಜೀವ್ ಕುಮಾರ್, ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ರಹಮತ್ ಅಲಿ ನೇತೃತ್ವದಲ್ಲಿ ಮಾಸ್ಕ್ ಜಾಗೃತಿ ಕಾರ್ಯಕ್ರಮ ನಡೆದಿದ್ದು, ಗ್ರಾಮಾಂತರ ಠಾಣೆ ಸಿಪಿಐ ಸಂಜೀವ್ ಕುಮಾರ್ ಖುದ್ದು ಫೇಸ್ ಶೀಲ್ಡ್ ಧರಿಸಿ ಕಾರ್ಯಾಚರಣೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.