
ತೇಜಸ್ವಿ ಸೂರ್ಯ
ಶಿವಮೊಗ್ಗ: ‘ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಮೆಟ್ರೊಗಳಿಗೆ ಹೋಲಿಸಿದರೆ ಬೆಂಗಳೂರಿನ ‘ನಮ್ಮ ಮೆಟ್ರೊ’ ದರ ದುಬಾರಿಯಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.
‘8–10 ತಿಂಗಳ ಹಿಂದಷ್ಟೇ ಬಿಎಂಆರ್ಸಿಎಲ್ ಶೇ 72ರಷ್ಟು ದರ ಏರಿಕೆ ಮಾಡಿತ್ತು. ಈಗ ಮತ್ತೆ ದರ ಏರಿಸುವುದಾಗಿ ಘೋಷಿಸಲಾಗಿದೆ. ಹಿಂದೆ ಮೆಟ್ರೊ ನಿರ್ಮಾಣಕ್ಕೆ ಸರ್ಕಾರ ಸಾಲ ಮಾಡುತ್ತಿತ್ತು, ಈಗ ಮೆಟ್ರೊದಲ್ಲಿ ಪ್ರಯಾಣಿಸಲು ಜನ ಸಾಲ ಮಾಡಬೇಕಾದ ಸ್ಥಿತಿ ಬಂದಿದೆ’ ಎಂದು ಮಾಧ್ಯಮದವರ ಎದುರು ವ್ಯಂಗ್ಯವಾಡಿದರು.
‘ಕೇಂದ್ರ ಸರ್ಕಾರದೊಂದಿಗೆ ಯಾವುದೇ ಸಮನ್ವಯತೆ ಇಲ್ಲದೆ ರಾಜ್ಯ ಸರ್ಕಾರ ಏಕಾಏಕಿ ಶೇ 5ರಷ್ಟು ದರ ಏರಿಕೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದರ ಏರಿಕೆ ಮಾಡಲಾಗುತ್ತಿದೆ. ರಾಜ್ಯದ ಬೊಕ್ಕಸ ಬರಿದಾಗಿದ್ದು, ಸರ್ಕಾರ ದಿವಾಳಿಯಾಗಿದೆ’ ಎಂದು ಕಿಡಿಕಾರಿದರು.
‘ಬೆಂಗಳೂರು ಮೆಟ್ರೊ ಮೂಲಕ ಟ್ರಾಫಿಕ್ ಸಮಸ್ಯೆ ಸುಧಾರಿಸಬೇಕಾಗಿದ್ದ ಸರ್ಕಾರ, ಜನರಿಗೆ ನರಕಯಾತನೆ ನೀಡಲು ಹೊರಟಿದೆ. ಕೇಂದ್ರ ಸರ್ಕಾರಕ್ಕೆ ಒಂದು ಪತ್ರ ಬರೆದರೆ ಸಾಕು ದರ ಇಳಿಸಬಹುದು. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಏಕೆ ಪತ್ರ ಬರೆಯುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ವಿರೋಧ ಪಕ್ಷಗಳ ಸದಸ್ಯರು ಪ್ರಧಾನಿಯ ಆಸನದ ಬಳಿ ಬಂದು ಪ್ರತಿಭಟನೆ ನಡೆಸಿರುವುದು ದೇಶದ ದುರಂತ. ಸಂಸತ್ತಿನ ಇತಿಹಾಸದಲ್ಲೇ ಇದು ಮೊದಲು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸದಸ್ಯರು ಪ್ರಜಾಪ್ರಭುತ್ವದ ಕಗ್ಗೋಲೆಗೆ ಮುಂದಾಗಿದ್ದಾರೆ’ ಎಂದು ದೂರಿದರು.
‘ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಪತ್ರದ ಬಳಕೆಗೆ ಮುಂದಾಗಿದ್ದು, ಇದು ರಾಜ್ಯವನ್ನು ಮತ್ತೆ ಹಿಂದಕ್ಕೆ ಕೊಂಡೊಯ್ಯುವ ಚಿಂತನೆಯಾಗಿದೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿಯಾಗಿರಲಿದೆ. ಸೋತಾಗ ಮಾತ್ರ ಇವಿಎಂ ಮೇಲೆ ಆರೋಪ ಮಾಡುತ್ತಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.